ವಿಜಯಪುರ: ಇಲ್ಲಿಂದ ಶಿಡ್ಲಘಟ್ಟ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಮುಂತಾದ ಕಡೆಗಳಿಗೆ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಪ್ರತಿನಿತ್ಯ ಬೆಳಿಗ್ಗೆ 7.30 ರಿಂದ 9.30ರ ನಡುವೆ ಬಸ್ ವ್ಯವಸ್ಥೆ ಬೇಕು ಎಂದು ಸ್ಥಳೀಯ ಮುಖಂಡ ಶಾಮಣ್ಣ ಒತ್ತಾಯಿಸಿದರು.
‘ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಎಷ್ಟೇ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಒಮ್ಮೆ ವಿದ್ಯಾರ್ಥಿಗಳೆಲ್ಲರೂ ಬಸ್ ತಡೆದು ಪ್ರತಿಭಟನೆ ನಡೆಸಿದ್ದರು. ಇಲ್ಲಿಗೆ ಬಂದಿದ್ದ ಚಿಕ್ಕಬಳ್ಳಾಪುರ ಬಸ್ ಡಿಪೋ ವ್ಯವಸ್ಥಾಪಕರು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬೆಳಗ್ಗೆ ಮತ್ತು ಸಂಜೆ ಹೆಚ್ಚಿನ ಬಸ್ಗಳನ್ನು ಕಳುಹಿಸಲಾಗುತ್ತದೆ ಎಂದು ಭರವಸೆ ನೀಡಿದ್ದರು. ಆದರೆ ಆ ಭರವಸೆ ಸುಳ್ಳಾಗಿದೆ’ ಎಂದು ಅವರು ಹೇಳಿದರು.
ದೊಡ್ಡಬಳ್ಳಾಪುರ, ಯಲಹಂಕದ ಕಡೆಗೆ ಬಟ್ಟೆ ತಯಾರಿಕೆ ಮಾಡುವ ಕಾರ್ಖಾನೆಗೆ ತೆರಳುವ ಮಹಿಳಾ ಕಾರ್ಮಿಕರು ಸಮಯಕ್ಕೆ ಸರಿಯಾಗಿ ಬಸ್ಗಳಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಖಾಸಗಿ ಬಸ್ಗಳು ಹೆಚ್ಚಾಗಿ ಬರುತ್ತವೆ. ಅವುಗಳಲ್ಲಿ ನಿಗದಿಗಿಂತ ಹೆಚ್ಚು ಮಂದಿಯನ್ನು ತುಂಬಿಸುತ್ತಾರೆ. ಹೆಣ್ಣು ಮಕ್ಕಳು ಬಾಗಿಲುಗಳಲ್ಲಿ ನಿಂತು ಪ್ರಯಾಣಿಸಬೇಕಾಗಿರುವುದರಿಂದ ಹತ್ತುವುದಿಲ್ಲ ಎಂದರು.