ಮುಳಬಾಗಿಲು: ‘ಅಬಕಾರಿ ಸಚಿವ ಎಚ್. ನಾಗೇಶ್ ಅವರು ಚುನಾವಣಾ ನೀತಿಸಂಹಿತೆ ಉಲ್ಲಂಘಿಸುತ್ತಿದ್ದಾರೆ. ಪ್ರತಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಸದಸ್ಯರಿಗೆ ಕೋಟ್ಯಂತರ ರೂಪಾಯಿಯ ಆಮಿಷವೊಡ್ಡುತ್ತಿದ್ದಾರೆ’ ಎಂದು ರಾಜ್ಯ ಜೆಡಿಎಸ್ ಮುಖಂಡ ಸಮೃದ್ಧಿ ಮಂಜುನಾಥ್ ಆರೋಪಿಸಿದರು.
ನಗರದಲ್ಲಿ ಗುರುವಾರ ವಿಧಾನ ಪರಿಷತ್ನ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ಚೌಡರೆಡ್ಡಿ ಪರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
‘ಸರ್ಕಾರದ ಅಧಿಕಾರ ಬಲದಿಂದ ನೀತಿಸಂಹಿತೆ ಉಲ್ಲಂಘನೆ ಮಾಡುತ್ತಿದ್ದಾರೆ. ಕೊರೊನಾ ಸೋಂಕಿನ ನಡುವೆಯೇ ನೂರಾರು ಜನರನ್ನು ಸೇರಿಸಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಜೆಡಿಎಸ್ ಮುಖಂಡರಿಗೆ ತಮ್ಮ ಬಣಕ್ಕೆ ಸೇರುವಂತೆ ಅಮಿಷವೊಡ್ಡುತ್ತಿದ್ದಾರೆ’ ಎಂದು ದೂರಿದರು.
ತಾಲ್ಲೂಕಿನಲ್ಲಿ ಭ್ರಷ್ಟಾಚಾರ ಮೀತಿ ಮೀರಿದೆ. ಅಧಿಕಾರಿಗಳನ್ನು ಆರು ತಿಂಗಳು ಉಳಿಸಿಕೊಳ್ಳುತ್ತಿಲ್ಲ. ಹೊಸ ಅಧಿಕಾರಿಗಳನ್ನು ಕರೆಸಿ ಇಂತಿಷ್ಟು ಹಣ ನೀಡಲು ಅವರ ಏಜೆಂಟರ್ ಮೂಲಕ ತಾಕೀತು ಮಾಡಲಾಗುತ್ತಿದೆ. ನವೆಂಬರ್ 2ರ ನಂತರ ತಾಲ್ಲೂಕಿನ ಅಭಿವೃದ್ಧಿ ಕಾಮಗಾರಿಗಳಲ್ಲಿ ಪಡೆದಿರುವ ಕಮಿಷನ್, ವರ್ಗಾವಣೆ ದಂಧೆಯ ಬಗ್ಗೆ ದಾಖಲೆ ಸಮೇತ ಬಹಿರಂಗಪಡಿಸುತ್ತೇವೆ ಎಂದು ತಿಳಿಸಿದರು.
ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಕಾಡೇನಹಳ್ಳಿ ನಾಗರಾಜ್ ಮಾತನಾಡಿ, ಈ ಬಾರಿ ಜೆಡಿಎಸ್ ಅಭ್ಯರ್ಥಿ ಚೌಡರೆಡ್ಡಿ ಗೆಲುವು ನಿಶ್ಚಿತಎಂದು ಹೇಳಿದರು.
ಜೆಡಿಎಸ್ ಪಕ್ಷ ಬಲಾಢ್ಯವಾಗಿದೆ. ಪಕ್ಷದ ಕಾರ್ಯಕರ್ತರನ್ನು ಯಾರು ಖರೀದಿಸಲು ಸಾಧ್ಯವಿಲ್ಲ. ಪಕ್ಷ ವಿರೋಧಿ ಚಟುವಟಿಕೆಯ ಹಿನ್ನೆಲೆಯಲ್ಲಿ ಜಯರಾಮರೆಡ್ಡಿ ಮತ್ತು ಚಿನ್ನಪ್ಪ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ ಎಂದರು.
ಮುಖಂಡ ಎಂ.ಎಸ್. ಶ್ರೀನಿವಾಸರೆಡ್ಡಿ ಮಾತನಾಡಿದರು.
ಜೆಡಿಎಸ್ ನಗರ ಘಟಕದ ಅಧ್ಯಕ್ಷ ತೇಜೋರಮಣ ಮಾತನಾಡಿದರು. ಮುಖಂಡರಾದ ಕವತನಹಳ್ಳಿ ಮುನಿಶಾಮಿಗೌಡ, ವಮ್ಮಸಂದ್ರ ಮುನಿವೆಂಕಟಪ್ಪ, ಬಲ್ಲಾಂ ಶ್ರೀನಿವಾಸ್, ನಗರಸಭೆ ಸದಸ್ಯ ರಿಯಾಜ್, ಪೊಂಬರಹಳ್ಳಿ ಮಂಜುನಾಥ್ ಹಾಜರಿದ್ದರು.