ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನಕ್ಕೆ ನಿರೀಕ್ಷೆ ಮೀರಿ ಉತ್ಸಾಹ

ಮತದಾರರ ಉತ್ಸಾಹಕ್ಕೆ ಸಾಟಿಯಾಗಲಿಲ್ಲ ಯಂತ್ರಗಳು; ಜಿಲ್ಲೆಯಲ್ಲಿ ಶೇ 80 ಮತದಾನ
Last Updated 13 ಮೇ 2018, 7:39 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ಶನಿವಾರ ವಿಧಾನ ಸಭಾ ಚುನಾವಣೆಯು ಶಾಂತಿಯುತವಾಗಿ ನಡೆಯಿತು. ಬೆಳಿಗ್ಗೆ ಆರಂಭದಲ್ಲಿ ಮಂದವಾಗಿದ್ದ ಮತದಾನ 10 ಗಂಟೆಯ ಬಳಿಕ ಚೇತರಿಕೆ ಕಂಡಿತು.

ಪಾವಗಡ, ತುಮಕೂರು, ಶಿರಾ, ಮಧುಗಿರಿ, ತುರುವೇಕೆರೆ ಸೇರಿದಂತೆ ಹಲವು ಕಡೆ ಮತಯಂತ್ರ, ಮತ ಖಾತ್ರಿ ಯಂತ್ರದಲ್ಲಿ ತಾಂತ್ರಿಕ ದೋಷ ಕಂಡು ಬಂದಿತು. ಇದರಿಂದ ಸಂಬಂಧಪಟ್ಟ ಮತಗಟ್ಟೆಗಳಲ್ಲಿ ಮತದಾನಕ್ಕೆ ವಿಳಂಬವಾಯಿತು.

ಮತ ಖಾತ್ರಿ ಯಂತ್ರ ಈ ಬಾರಿ ಅಳವಡಿಸಿದ್ದರಿಂದ 7 ಸೆಕೆಂಡ್ ಹೆಚ್ಚಿನ ಸಮಯ ಆಗುತ್ತಿದೆ. ಹೀಗಾಗಿ, ಮತದಾನಕ್ಕೆ ಸ್ವಲ್ಪ ವಿಳಂಬಕ್ಕೆ ಇದೂ ಒಂದು ಕಾರಣ ಎಂದು ಮತಗಟ್ಟೆ ಅಧಿಕಾರಿಗಳು, ಜನಪ್ರತಿನಿಧಿಗಳು ಹೇಳಿದರು.

ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶಗಳಲ್ಲಿಯೇ ಮತದಾರರು ಮತದಾನಕ್ಕೆ ಹೆಚ್ಚಿನ ಉತ್ಸಾಹ ತೋರಿದ್ದು, ಮತ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ನಗರ ಪ್ರದೇಶದಲ್ಲಿ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಮತದಾರರ ಮನೆ ಬಾಗಿಲಿಗೆ ಹೋಗಿ ಕರೆತಂದು ಮತ ಚಲಾಯಿಸುತ್ತಿದ್ದುದು ಕಂಡು ಬಂದರೆ, ಗ್ರಾಮೀಣ ಪ್ರದೇಶದಲ್ಲಿ ಸ್ವಯಂ ಪ್ರೇರಿತರಾಗಿ ಬಂದು ಮತ ಚಲಾಯಿಸಿದರು.

ತುಮಕೂರು ನಗರ ಪ್ರದೇಶದ ಮರಳೂರು ದಿಣ್ಣೆ, ಜಯನಗರ, ಪಿ.ಎಚ್.ಕಾಲೊನಿ ಸೇರಿದಂತೆ ಆಯ್ದ ಮತಗಟ್ಟೆಗಳನ್ನು ಹೊರತುಪಡಿಸಿದರೆ ಬಹುತೇಕ ಮತಗಟ್ಟೆಗಳಲ್ಲಿ ಮತದಾರರ ಅಷ್ಟೊಂದು ಉತ್ಸಾಹ ಕಂಡು ಬರಲಿಲ್ಲ.

ಜಿಲ್ಲೆಯಲ್ಲಿ ಪುರುಷರಿಗಿಂತ ಮಹಿಳಾ ಮತದಾರರೇ ಮತದಾನಕ್ಕೆ ಹೆಚ್ಚಿನ ಉತ್ಸಾಹ ತೋರಿದರು. ಕೆಲ ಮತಗಟ್ಟೆಗಳಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಸಾಲು ಗಳಲ್ಲಿ ನಿಂತು ಮತ ಚಲಾಯಿಸಿದರು. ಅನೇಕ ಕಡೆ ಒಂದೇ ಸಾಲಿನಲ್ಲಿ ನಿಂತು ಮತದಾನ ಮಾಡಿದರು.

ಕೂನಹಳ್ಳಿಯಲ್ಲಿ ಮಾತಿನ ಚಕಮಕಿ

ಮಧುಗಿರಿ ತಾಲ್ಲೂಕಿನ ಕೂನಹಳ್ಳಿಯಲ್ಲಿ ಹಿರಿಯರನ್ನು ಮತಗಟ್ಟೆಗೆ ಕರೆದುಕೊಂಡು ಹೋಗಿ ಮತ ಹಾಕಿಸುವ ಸಂಬಂಧ ಕೆಲ ಯುವಕರ ನಡುವೆ ಮಾತಿನ ಚಕಮಕಿ ನಡೆಯಿತು. ಎರಡೂ ಗುಂಪಿನ ಯುವಕರು ಪರಸ್ಪರ ಏರುಧ್ವನಿಯಲ್ಲಿ ಕೈ ಕೈ ಮಿಲಾಯಿಸುವ ಹಂತ ತಲುಪಿದರು. ಆಗ ಗ್ರಾಮದ ಕೆಲವರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಮಧುಗಿರಿ ತಾಲ್ಲೂಕಿನ ಪುರವರ, ಕೊಡಿಗೇನಹಳ್ಳಿ, ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಸೇರಿದಂತೆ ಎರಡೂ ತಾಲ್ಲೂಕಿನ ಬಹುತೇಕ ಮತಗಟ್ಟೆಯ ಹೊರ ಭಾಗದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಜಮಾಯಿಸಿದ್ದರು. ಆಯಾ ಪಕ್ಷದ ಟೋಪಿ ಮತ್ತು ಧ್ವಜವನ್ನು ಹಿಡಿದಿದ್ದರು. ಗ್ರಾಮಗಳ ರಸ್ತೆಯ ಎರಡೂ ಬದಿಗಳಲ್ಲಿ ಶಾಮಿಯಾನ ಹಾಕಿಸಿ ಮತದಾರರಿಗೆ ಮತಸಂಖ್ಯೆ ಬರೆದುಕೊಡುತ್ತಿದ್ದರು. ಕೆಲವು ಕಡೆಗಳಲ್ಲಿ ಮತಗಟ್ಟೆಯ ಎದುರು ಜಮಾಯಿಸಿ ಪರಸ್ಪರ ಘೋಷಣೆಗಳನ್ನು ಕೂಗಿದರು.

ಬಿಎಂಟಿಸಿ ಬಸ್‌ನಲ್ಲಿ ಟಿಕೆಟ್ ದರ ಹೆಚ್ಚಳ; ಆಕ್ರೋಶ

ಬಸ್‌ಗಳ ಕೊರತೆಯ ಕಾರಣಕ್ಕೆ ಬಿಎಂಟಿಸಿ (ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ) ತುಮಕೂರಿಗೆ ಬಸ್‌ ವ್ಯವಸ್ಥೆ ಮಾಡಿತ್ತು. ಆದರೆ ಈ ಬಸ್‌ಗಳಲ್ಲಿ ಟಿಕೆಟ್ ದರ ₹ 80 ಇತ್ತು. ‘ತುಮಕೂರಿನಿಂದ ಡಾಬಸ್‌ಪೇಟೆ, ಎಂಟನೇ ಮೈಲಿ ಹೀಗೆ ಎಲ್ಲೇ ಇಳಿದರೂ ₹ 80 ಟಿಕೆಟ್ ಪಡೆಯಬೇಕು ಎಂದು ನಿರ್ವಾಹಕರು ಹೇಳುತ್ತಿದ್ದರು. ನಿಲ್ದಾಣದಲ್ಲಿ ಬಸ್ ಹತ್ತಿದವರು ಇದರಿಂದ ಭದ್ರಮ್ಮ ಸರ್ಕಲ್, ವಿಶ್ವವಿದ್ಯಾನಿಲಯದ ನಿಲ್ದಾಣದಲ್ಲಿ ಇಳಿದುಕೊಳ್ಳುತ್ತಿದ್ದರು. ಮತ್ತೇ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಹತ್ತುತ್ತಿದ್ದರು. ಇದರಿಂದ ನಗರದಿಂದ ಬೇರೆ ಕಡೆಗಳಿಗೆ ಮತದಾನ ಮಾಡಲು ಹೊರಟಿದ್ದವರು ಅಸಮಾಧಾನ ವ್ಯಕ್ತಪಡಿಸಿದರು.

‘ನಾವು ಟಿಕೆಟ್ ಬೆಲೆಯನ್ನು ಹೆಚ್ಚು ಮಾಡಿಲ್ಲ. ಎಂದಿನಂತೆ ₹ 72 ಇದೆ. ಆದರೆ ಬಿಎಂಟಿಸಿ ಅವರು ಬಿಟ್ಟಿರುವ ಬಸ್‌ಗಳ ಟಿಕೆಟ್ ದರ ಹೆಚ್ಚಿಸಿರಬಹುದು’ ಎಂದು ಜಿಲ್ಲಾ ಸಾರಿಗೆ ಇಲಾಖೆ ಅಧಿಕಾರಿಯೊಬ್ಬರು.

ಬಸ್ ಇಲ್ಲದೇ ಮತದಾರರ ಪರದಾಟ

ಬೇರೆ ಊರುಗಳಲ್ಲಿ ನೌಕರಿ ಮಾಡುವ, ಗುಳೇ ಹೋದವರು ಮತದಾನಕ್ಕೆ ಸ್ವಗ್ರಾಮಕ್ಕೆ ತೆರಳಲು ಮತದಾರರು ಪರದಾಡಿದರು.

ತುಮಕೂರು ನಗರ, ಜಿಲ್ಲೆಯ ತಾಲ್ಲೂಕು ಕೇಂದ್ರಗಳಲ್ಲಿ ಮತದಾರರು ಬಸ್, ಟೆಂಪೊ, ಖಾಸಗಿ ಬಸ್‌ಗೆ ಪರದಾಡಿದರು. ಮತದಾನಕ್ಕಾಗಿಯೇ ದೂರದಿಂದ ಬಂದಿದ್ದೇವೆ. ಬಸ್ ಇಲ್ಲದೇ ಇದ್ದರೆ ನಾವು ಬಂದಿದ್ದಕ್ಕೆ ಏನು ಪ್ರಯೋಜನವಾಗುವುದಿಲ್ಲ ಅಳಲು ತೋಡಿಕೊಂಡರು.

ಮತದಾನ ಮಾಡಿ ಎಂದು ಜಾಗೃತಿ ಮಾಡಿದರೆ ಸಾಲದು. ಮತದಾನಕ್ಕೆ ಬಸ್ ಸೇರಿದಂತೆ ಮತದಾರರಿಗೆ ಅನುಕೂಲ ಕಲ್ಪಿಸಬೇಕು ಎಂದು ತುಮಕೂರು ಟೌನ್ ಹಾಲ್‌ನಲ್ಲಿ ಬಸ್‌ ಗಾಗಿ ಕಾದು ನಿಂತಿದ್ದ ಹೊನಸಿಗೆರೆ ಗ್ರಾಮದ ರಾಜೇಶ್ ಅವರು 'ಪ್ರಜಾವಾಣಿ'ಗೆ ಹೇಳಿದರು.

ಯಂತ್ರಗಳಲ್ಲಿ ದೋಷ

ಜಿಲ್ಲೆಯ ಹಲವೆಡೆ ಮತಯಂತ್ರ, ಮತಖಾತ್ರಿ ಯಂತ್ರದಲ್ಲಿ ದೋಷ ಕಂಡು ಬಂದಿತು. ತುಮಕೂರು ತಾಲ್ಲೂಕು ಬಳ್ಳಗೆರೆ, ಪಾವಗಡ ತಾಲ್ಲೂಕು ಜಾಜೂರಾಯನಹಳ್ಳಿ, ಹುಳಿಯಾರು ಹೋಬಳಿಯ ಗಾಣಧಾಳು ಗ್ರಾಮದ ಮತಗಟ್ಟೆಯಲ್ಲಿ, ಶಿರಾ ತಾಲ್ಲೂಕಿನ ಜೋಗಿಹಳ್ಳಿಯಲ್ಲಿ ವಿವಿ ಪ್ಯಾಟ್‌ನಲ್ಲಿ ತಾಂತ್ರಿಕ ದೋಷ ಕಂಡು ಬಂದಿತು.

ಅದನ್ನು ಬದಲಾಯಿಸಿ ಬೇರೆ ವಿವಿ ಪ್ಯಾಟ್ ಅಳವಡಿಸಲಾಗಿದೆ. ಗುಬ್ಬಿ ತಾಲ್ಲೂಕು ಚೇಳೂರು, ಪಾವಗಡ ತಾಲ್ಲೂಕಿನ ಸಾಸಲುಕುಂಟೆ, ಬೋಡರಹಳ್ಳಿ, ಶಿರಾ ತಾಲ್ಲೂಕಿನ ಪಟ್ಟನಾಯಕನಹಳ್ಳಿ ಮತ್ರು ಭೂವನಹಳ್ಳಿಯಲ್ಲಿ ಮತಯಂತ್ರದಲ್ಲಿ ದೋಷ ಕಾಣಿಸಿಕೊಂಡಿತು.

ಮಧುಗಿರಿ ತಾಲ್ಲೂಕಿನ ಹೊನ್ನಾಪುರ ಗ್ರಾಮದ ಮತಗಟ್ಟೆಯಲ್ಲಿ ಮತಖಾತ್ರಿ ಯಂತ್ರದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು 1 ಗಂಟೆ ಮತದಾನ ಸ್ಥಗಿತಗೊಂಡಿತ್ತು. ನಂತರ ಅಧಿಕಾರಿಗಳು ಬೇರೆ ಮತಖಾತ್ರಿ ಯಂತ್ರ ಅಳವಡಿಸಿದ ಬಳಿಕ ಮತದಾನ ಪ್ರಕ್ರಿಯೆ ನಡೆಯಿತು.

ಅಭ್ಯರ್ಥಿಗಳ ಬೆಂಬಲಿಗರ ಕಿರಿ ಕಿರಿ ಇರಲಿಲ್ಲ

ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶದ ಯಾವುದೇ ಮತಗಟ್ಟೆಗೆ ಹೋದರೂ ಈ ಬಾರಿ ಅಭ್ಯರ್ಥಿ ಬೆಂಬಲಿಗರು, ಒತ್ತಾಯ ಪೂರ್ವಕವಾಗಿ ಮತಗಟ್ಟೆಗೆ ಕರೆಯುತ್ತಿದ್ದವರು ಕಂಡು ಬರಲಿಲ್ಲ. ಹಿಂದಿನಂತೆ ಮತದಾರರಿಗೆ ಪಕ್ಷದ ಬೆಂಬಲಿಗರು ದುಂಬಾಲು ಬಿದ್ದು ಬರುತ್ತಿದ್ದ ಕಿರಿ ಕಿರಿ ಮತದಾರರಿಗೆ ಆಗಲಿಲ್ಲ. ಹೀಗಾಗಿ, ಮತದಾರರು ನಿರಾಳವಾಗಿ ಮತಗಟ್ಟೆಗೆ ಬಂದು ಮತ ಚಲಾಯಿಸಿದರು.

ಮತದಾನ ಹೆಚ್ಚಳಕ್ಕೆ ಕೈ ಜೋಡಿಸಿದ ಮಳೆರಾಯ

ಮಧ್ಯಾಹ್ನದ ಬಳಿಕ ಮಳೆ ಬಂದು ಬಿಡುತ್ತದೆ. ಎರಡು ದಿನಗಳ ಹಿಂದೆಯೇ ಹವಾಮಾನ ಇಲಾಖೆ ವರದಿ ಮಾಡಿದೆ. ಹೇಳಿದಂತೆ ಈಗಾಗಲೇ ಎರಡು ದಿನಗಳಿಂದ ಸಂಜೆ ಮಳೆಯಾಗಿದೆ. ಬೇಗ ಮತಚಲಾಯಿಸಬೇಕು ಎಂದು ಮತಗಟ್ಟೆಯತ್ತ ಮತದಾರರು 10 ಗಂಟೆ ಹೊತ್ತಿಗೆಯೇ ಮತಗಟ್ಟೆಗೆ ದೌಡಾಯಿಸಿದರು ಎಂದು ಹೇಳಲಾಗಿದೆ.

ಸಂಜೆಯಾದರೆ ಮಳೆ ಬಂದು ಮತಗಟ್ಟೆಗೆ ಹೋಗಲು ಸಾಧ್ಯವಾಗುವುದಿಲ್ಲ. ಬೇಗ ಮತದಾನ ಮಾಡಬೇಕು ಎಂದು ಬಂದಿದ್ದೇವೆ ಎಂದು ಮತದಾರರು ಮತಗಟ್ಟೆ ಅಧಿಕಾರಿಗಳಿಗೆ ಹೇಳಿಕೊಂಡಿದ್ದಾರೆ.

ಕೂನಹಳ್ಳಿಯಲ್ಲಿ ಮಾತಿನ ಚಕಮಕಿ

ಮಧುಗಿರಿ ತಾಲ್ಲೂಕಿನ ಕೂನಹಳ್ಳಿಯಲ್ಲಿ ಹಿರಿಯರನ್ನು ಮತಗಟ್ಟೆಗೆ ಕರೆದುಕೊಂಡು ಹೋಗಿ ಮತ ಹಾಕಿಸುವ ಸಂಬಂಧ ಕೆಲ ಯುವಕರ ನಡುವೆ ಮಾತಿನ ಚಕಮಕಿ ನಡೆಯಿತು. ಎರಡೂ ಗುಂಪಿನ ಯುವಕರು ಪರಸ್ಪರ ಏರುಧ್ವನಿಯಲ್ಲಿ ಕೈ ಕೈ ಮಿಲಾಯಿಸುವ ಹಂತ ತಲುಪಿದರು. ಆಗ ಗ್ರಾಮದ ಕೆಲವರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಮಧುಗಿರಿ ತಾಲ್ಲೂಕಿನ ಪುರವರ, ಕೊಡಿಗೇನಹಳ್ಳಿ, ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಸೇರಿದಂತೆ ಎರಡೂ ತಾಲ್ಲೂಕಿನ ಬಹುತೇಕ ಮತಗಟ್ಟೆಯ ಹೊರ ಭಾಗದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಜಮಾಯಿಸಿದ್ದರು. ಆಯಾ ಪಕ್ಷದ ಟೋಪಿ ಮತ್ತು ಧ್ವಜವನ್ನು ಹಿಡಿದಿದ್ದರು. ಗ್ರಾಮಗಳ ರಸ್ತೆಯ ಎರಡೂ ಬದಿಗಳಲ್ಲಿ ಶಾಮಿಯಾನ ಹಾಕಿಸಿ ಮತದಾರರಿಗೆ ಮತಸಂಖ್ಯೆ ಬರೆದುಕೊಡುತ್ತಿದ್ದರು. ಕೆಲವು ಕಡೆಗಳಲ್ಲಿ ಮತಗಟ್ಟೆಯ ಎದುರು ಜಮಾಯಿಸಿ ಪರಸ್ಪರ ಘೋಷಣೆಗಳನ್ನು ಕೂಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT