ಸೂಲಿಬೆಲೆ: ಕಲಿಕೆಯ ಉಪಯೋಗ ಉದ್ಯೋಗ, ಜೀವನ ನಿರ್ವಹಣೆ, ಕುಟುಂಬಕ್ಕೆ ಸಿಮೀತವಾಗದೇ ಬೇರೆಯವರಿಗೆ, ದೇಶಕ್ಕೆ ಉಪಯೋಗವಾಗುವಂತಾಗಬೇಕು ಅದು ನಿಜವಾದ ಕಲಿಕೆ, ಜ್ಞಾನ ಎಂದು ಸ್ವಾತಂತ್ರ್ಯ ಹೋರಾಟಗಾರರಾದ ಸೂ.ರಂ. ರಾಮಯ್ಯ ಹೇಳಿದರು.
ಸೂಲಿಬೆಲೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ನಡೆದ ಸಾಂಸ್ಕೃತಿಕ, ಕ್ರೀಡೆ, ಎನ್ಎಸ್ಎಸ್, ಎನ್ಸಿಸಿ ಚಟುವಟಿಕೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಕೆ.ಜಿ.ಸಿ.ಟಿ.ಎ. ಅಧ್ಯಕ್ಷ ಡಾ.ಟಿ.ಎಂ. ಮಂಜುನಾಥ್ ಮಾತನಾಡಿ, ಕಾಲೇಜಿನ ವಿದ್ಯಾರ್ಥಿ ಜೀವನ ಮಾತ್ರ ನೆಮ್ಮದಿಯ ದಿನಗಳಾಗಿರುತ್ತವೆ. ಕಾಲೇಜಿನ ಜೀವನದಲ್ಲಿ ಜ್ಞಾನ, ಸ್ನೇಹವನ್ನು ಸಾಧಿಸಿಕೊಳ್ಳಬೇಕು. ಯಾರನ್ನು ದ್ವೇಷವನ್ನು ಸಾಧಿಸಬಾರದು. ಒಳ್ಳೆಯ ಜ್ಞಾನ ಮತ್ತು ಸ್ನೇಹಗಳು ಜೀವನಕ್ಕೆ ಬೇಕಾದ ಬುನಾದಿಯನ್ನು ಹಾಕಿಕೊಡುತ್ತದೆ. ಪದವಿಯ 3 ಅಥವಾ 5 ವರ್ಷಗಳನ್ನು ವಿದ್ಯಾಭ್ಯಾಸಕ್ಕೆ ಬಳಸಿಕೊಂಡರೆ ಇಡೀ ಜೀವನ ಉತ್ತಮವಾಗಿರುತ್ತದೆ ಎಂದರು.
ಈ ಗ್ರಾಮಾಂತರ ಕಾಲೇಜಿನಲ್ಲಿ ಶೇ 70 ಕ್ಕಿಂತ ಹೆಚ್ಚಿನ ಹೆಣ್ಣು ಮಕ್ಕಳೇ ಇದ್ದಾರೆ. ಉನ್ನತ ವಿದ್ಯಾಭ್ಯಾಸ ಮಾಡುವವರ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳು ಮುಂದುವರೆಯುತ್ತಿರುವುದು ಆರೋಗ್ಯಕರ ಸಮಾಜಕ್ಕೆ ಮುನ್ನುಡಿ ಎಂದರು.
ಒಂದು ಕಾಲದಲ್ಲಿ ಹೆಣ್ಣು ಎಂದರೆ ಹೊಸಲಿನ ಒಳಗೆ ಎನ್ನುವಂತಹ ಭಾವನೆ ಇತ್ತು. ಮುಂದಿನ ದಿನಗಳಲ್ಲಿ ಭಾರತೀಯ ಸಮಾಜ ಆರ್ಥಿಕವಾಗಿ ಸದೃಢವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.
ಗ್ರಾಮೀಣ ಪ್ರದೇಶದಲ್ಲಿರುವ ಪೋಷಕರು ಕಷ್ಟವನ್ನು ಮೆಟ್ಟಿ ಮಕ್ಕಳನ್ನು ಶಾಲಾ-ಕಾಲೇಜಿನ ವ್ಯಾಸಂಗಕ್ಕೆ ಕಳುಹಿಸುತ್ತಾರೆ ಅವರನ್ನು ಮತ್ತು ಅವರ ಶ್ರಮವನ್ನು ಯಾವತ್ತು ಮರೆಯಬಾರದು ಎಂದರು.
ಕೆ.ಜಿ.ಸಿ.ಟಿ.ಎ. ಉಪಾಧ್ಯಕ್ಷ ಡಾ. ಶಿವಪೂಜಿ ಕೋಟಿ ಮಾತನಾಡಿ, ಪದವಿ ತರಗತಿಗಳಲ್ಲಿ ಕಲಿಕೆ ಏಕಮುಖವಾಗಿ ನಡೆಯುತ್ತಿದೆ ಎಂದರು. ಇದರಿಂದ ವಿದ್ಯಾರ್ಥಿಗಳಲ್ಲಿ ಚಿಂತನೆ ಹುಟ್ಟುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದರು.
ಐ.ಐ.ಎಂ. ಮತ್ತು ಐ.ಐ.ಟಿ ತರಗತಿಗಳ ರೀತಿಯಲ್ಲಿ ಪದವಿಯ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ಕಲಿಕೆಯಲ್ಲಿ ಪರಸ್ಪರ ಸಂವಹನ ಇದ್ದರೆ ಕಲಿಕೆ ಗುಣಮಟ್ಟದಿಂದ ಹೆಚ್ಚುತ್ತದೆ ಎಂದರು.
ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಎಂ. ಮುನಿನಾರಯಣಪ್ಪ, ಜಂಟಿ ನಿರ್ದೇಶಕರ ಪ್ರಾದೇಶಿಕ ಕಚೇರಿ ವಿಶೇಷಾಧಿಕಾರಿ ಡಾ.ವೈ. ರಮೇಶ್, ಡಾ.ಹೆಚ್.ಜಿ. ನಾರಾಯಣ, ಡಾ.ಆರ್. ಶಂಕರಪ್ಪ, ಪ್ರೊ.ಹೆಚ್. ನಾಗರಾಜು ಮಾತನಾಡಿದರು.
ಪ್ರಾಂಶುಪಾಲ ಪ್ರೊ.ಸಿ. ನಾರಾಯಣಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಕ್ರೀಡೆ, ಸಾಂಸ್ಕೃತಿಕ ಮತ್ತು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪಾರಿತೋಷಕಗಳನ್ನು ನೀಡಲಾಯಿತು ಹಾಗೂ ಅಥಿತಿಗಳಿಗೆ ಸನ್ಮಾನಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.