ಆನೇಕಲ್ : ತಾಲ್ಲೂಕಿನ ಸರ್ಜಾಪುರದಲ್ಲಿ ಎಂಟನೇ ತರಗತಿ ಓದುತ್ತಿರುವ 14 ವರ್ಷದ ಬಾಲಕಿಗೆ 24 ವರ್ಷದ ಯುವಕನೊಂದಿಗೆ ಬಾಲ್ಯ ವಿವಾಹ ಮಾಡಲಾಗಿದೆ.
ತಂದೆ- ತಾಯಿಗೆ ವಿಷಯ ತಿಳಿಸದೆ ಹುಡುಗಿಯ ಅಜ್ಜಿ, ದೊಡ್ಡಪ್ಪ- ದೊಡ್ಡಮ್ಮ ಸೇರಿ ಫೆ. 15ರಂದು ಕೈವಾರದ ಯಲಮ್ಮ ದೇಗುಲದಲ್ಲಿ ವಿವಾಹ ಮಾಡಿಸಿದ್ದು, ಈ ಸಂಬಂಧ ಬಾಲಕಿಯ ತಾಯಿ ಸರ್ಜಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರಿನ ಅನ್ವಯ ಸರ್ಜಾಪುರ ಪೊಲೀಸರು ಬಾಲಕಿಯ ಅಜ್ಜಿ ರಾಜಮ್ಮ, ಸಂಬಂಧಿಕರಾದ ಶ್ರೀನಿವಾಸ್, ಉಮಾ, ಮುನಿಯಪ್ಪ, ವೆಂಕಟಮ್ಮ, ಮುನಿಯಪ್ಪ, ರತ್ನಮ್ಮ, ವಿನೋಧ್ ಕುಮಾರ್, ವಿಜಯ್ ಕುಮಾರ್ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಬಾಲ್ಯ ವಿವಾಹ ನಿಷೇಧ ಕಾಯ್ದೆ ಮತ್ತು ಐಪಿಸಿ 366ಎ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
‘ಸರ್ಜಾಪುರದ ಪ್ರೌಢಶಾಲೆಯಲ್ಲಿ 8ನೇ ತರಗತಿ ಓದುತ್ತಿರುವ 14 ವರ್ಷದ ನನ್ನ ಮಗಳು ನನ್ನ ಗಂಡನ ತಾಯಿ ರಾಜಮ್ಮ ಅವರ ಮನೆಯಲ್ಲಿ ಸದಾ ಇರುತ್ತಿದ್ದಳು. ಗುರುವಾರ ಅಜ್ಜಿಯ ಮನೆಯಲ್ಲಿದ್ದ ಬಾಲಕಿಯು ಶುಕ್ರವಾರದವರೆಗೆ ಮನೆಗೆ ಬಾರದಿದ್ದಾಗ ಗಾಬರಿಗೊಂಡು ರಾಜಮ್ಮ ಅವರನ್ನು ವಿಚಾರಿಸಿದಾಗ ಬಾಲಕಿ ಮತ್ತು ತಾನು ತಿಗಳಚೌಡದೇನಹಳ್ಳಿಯಲ್ಲಿ ಇರುವುದಾಗಿ ತಿಳಿಸಿದರು. ಮರುದಿನ ಕಾಟೇರಮ್ಮ ದೇವಾಲಯಕ್ಕೆ ಬರುವಂತೆ ತಿಳಿಸಿದ್ದರು’. ಅದರಂತೆ ಬಾಲಕಿಯ ತಾಯಿಯು ಹೊಸಕೋಟೆಗೆ ಹೋಗಿದ್ದೇವು’.
ಹೊಸಕೋಟೆಯಲ್ಲಿ ಸಂಬಂಧಿಯೊಬ್ಬರು ಹಲಸಿನಕಾಯಿಪುರಗೆ ಕರೆದುಕೊಂಡು ಹೋಗಿದಾಗ ಅಲ್ಲಿ ನನ್ನ ಮಗಳಿಗೆ ಅದೇ ಗ್ರಾಮದ ವಿನೋದ್ ಕುಮಾರ್ ಅವರೊಂದಿಗೆ ಮದುವೆ ಮಾಡಿಸಿರುವುದು ಗೊತ್ತಾಗಿದೆ. ನನ್ನ ಗಮನಕ್ಕೆ ತರದೆ ಅಪ್ರಾಪ್ತ ನನ್ನ ಮಗಳಿಗೆ ಮದುವೆ ಮಾಡಿಸಿರುವವರ ವಿರುದ್ಧ ಕ್ರಮ ಜರುಗಿಸಬೇಕೆಂದು’ ಬಾಲಕಿಯ ತಾಯಿ ದೂರಿನಲ್ಲಿ ತಿಳಿಸಿದ್ದಾರೆ.