ವಿಜಯಪುರ: ‘ಶೈಕ್ಷಣಿಕ ಅಭಿವೃದ್ಧಿಗಾಗಿ ಸಂಘ, ಸಂಸ್ಥೆಗಳು ನೀಡುವ ಪ್ರತಿಭಾ ಪುರಸ್ಕಾರವನ್ನು ವಿದ್ಯಾರ್ಥಿಗಳಿಗೆ ತಲುಪಿಸಲು ನಿರ್ದೇಶಕರು ಗಮನಹರಿಸಬೇಕು’ ಎಂದು ಅರುಂಧತಿ ಸೇವಾ ಸಂಸ್ಥೆಯ ಅಧ್ಯಕ್ಷ ಸಿ. ಮುನಿಕೃಷ್ಣಪ್ಪ ಹೇಳಿದರು.
ಹೋಬಳಿಯ ಸಿ.ಎನ್. ಹೊಸೂರು ಗ್ರಾಮದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಹಲವು ವರ್ಷಗಳಿಂದ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.
ನ. 29 ರಂದು ಬೆಳಿಗ್ಗೆ 10ಗಂಟೆಗೆ ದೇವನಹಳ್ಳಿಯ ಅಂಬೇಡ್ಕರ್ ಭವನದಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತದೆ. ಪುರಸ್ಕಾರ ಪಡೆಯುವ ವಿದ್ಯಾರ್ಥಿಗಳು ಅಂಕಪಟ್ಟಿ, ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರದ ನಕಲು, ಎರಡು ಭಾವಚಿತ್ರ ಗಳೊಂದಿಗೆ ಅಕ್ಟೋಬರ್ 30ರೊಳಗೆ ಅರುಂಧತಿ ಸೇವಾ ಸಂಸ್ಥೆಯ ಕಚೇರಿಗೆ ಸಲ್ಲಿಸಬಹುದು ಎಂದರು.
ಸಭೆಯಲ್ಲಿ ಗೌರವಾಧ್ಯಕ್ಷ ನರಸಿಂಹಮೂರ್ತಿ, ಕಾರ್ಯಾಧ್ಯಕ್ಷ ಎನ್. ವೆಂಕಟಪ್ಪ, ಪ್ರಧಾನ ಕಾರ್ಯದರ್ಶಿ ಎಂ. ವೆಂಕಟೇಶ್, ಖಜಾಂಚಿ ಕೆ. ಮಂಜುನಾಥ್, ಎಸ್.ಎಂ. ಆನಂದ್ ಕುಮಾರ್, ಸಹ ಕಾರ್ಯದರ್ಶಿ ಮುನಿರಾಜಪ್ಪ(ಅಣ್ಣೇಶ್ವರ), ಎಂ. ಹರ್ಷನಾಥ್, ನರಸಿಂಹಮೂರ್ತಿ, ಅಮರನಾರಾಯಣಪ್ಪ, ವೇಣುಗೋಪಾಲ್ ಹಾಜರಿದ್ದರು.