ಕನಕಪುರ: ಜೀವ ವಿಮಾ ನಿಗಮ ಖಾಸಗೀಕರಣಗೊಳಿಸುವ ಕೇಂದ್ರ ಸರ್ಕಾರದ ಪ್ರಸ್ತಾವ ವಿರೋಧಿಸಿ ಎಲ್ಐಸಿ ಶಾಖೆ ನೌಕರರು ಶುಕ್ರವಾರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ವಿಮಾ ನೌಕರರಾದ ಚಂದ್ರು, ಮಹದೇವರಾವ್, ನರಸಿಂಹಮೂರ್ತಿ, ಗೋಪಾಲಕೃಷ್ಣ ಮಾತನಾಡಿ, ವಿಮಾ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ನೀಡುವುದು ಮತ್ತು ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣ ಮಾಡುವುದು ಸರಿಯಾದ ಕ್ರಮವಲ್ಲ ಎಂದು ಸರ್ಕಾರದ ನೀತಿ ಖಂಡಿಸಿದರು.
ಎಲ್ಐಸಿ ಸಂಸ್ಥೆ ವಿಶ್ವದಲ್ಲೇ ಅಗ್ರಮಾನ್ಯ ಸಂಸ್ಥೆಯಾಗಿದೆ. 30ಕೋಟಿಗೂ ಹೆಚ್ಚಿನ ಗ್ರಾಹಕರನ್ನು ಹೊಂದಿ ವಿಶ್ವಾಸ ಗಳಿಸಿರುವಂತ ದೊಡ್ಡ ಸಂಸ್ಥೆಯಾಗಿದೆ. ಅಲ್ಲದೆ, ದೇಶದ ಆರ್ಥಿಕ ಪ್ರಗತಿಗೆ ಅಪಾರ ಕೊಡುಗೆ ನೀಡುತ್ತಾ ಬಂದಿದೆ. ಸರ್ಕಾರದ ಈ ಕ್ರಮ ದೇಶದ ಆರ್ಥಿಕ ಪ್ರಗತಿಗೆ ಮತ್ತು ಅಭಿವೃದ್ಧಿಗೆ ಮಾರಕವಾಗಲಿದೆ ಎಂದು ಎಚ್ಚರಿಸಿದರು.