ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನ ಬಹಿಷ್ಕಾರಕ್ಕೆ ನಿರ್ಧಾರ

ಖಂಡೇಗೌಡನಪುರ, ಕಾಡಸೂರು ಗ್ರಾಮಸ್ಥರಿಂದ ಪತ್ರ
Last Updated 2 ಏಪ್ರಿಲ್ 2018, 13:47 IST
ಅಕ್ಷರ ಗಾತ್ರ

ಹಂಪಾಪುರ: ಗ್ರಾಮಕ್ಕೆ ಸಮರ್ಪಕ ಕುಡಿಯುವ ನೀರಿಲ್ಲ, ರಸ್ತೆ ಇಲ್ಲ, ಬಸ್ ಸೌಕರ್ಯ ಇಲ್ಲ, ಅಂಗನವಾಡಿ ಕಟ್ಟಡ ಇದ್ದರೂ ಶುಚಿತ್ವವಿಲ್ಲ, ಒಳ ಚರಂಡಿ ವ್ಯವಸ್ಥೆ ದೂರದ ಮಾತು, ಶಾಲೆಗೆ ತೆರಳಬೇಕಾದರೆ ನಿತ್ಯ ಮೂರು ಕಿಲೋಮೀಟರ್ ನಡೆಯಬೇಕಾದ ಅನಿವಾರ್ಯತೆ. ಇಷ್ಟೆಲ್ಲಾ ಸಮಸ್ಯೆ ಹೊಂದಿರುವ ನಾವು ಈ ಬಾರಿ ವಿಧಾನಸಭಾ ಚುನಾವಣೆಗೆ ಮತ ಹಾಕಲ್ಲ.ಹೀಗೆಂದು ಎಚ್.ಡಿ.ಕೋಟೆ ತಾಲ್ಲೂಕಿನ ಕಡೆ ಗ್ರಾಮಗಳಾದ ಖಂಡೇಗೌಡನಪುರ ಮತ್ತು ಕಾಡಸೂರು ಗ್ರಾಮಸ್ಥರು ಶುಕ್ರವಾರ ಗ್ರೇಡ್ –2 ತಹಶೀಲ್ದಾರ್ ಆನಂದ್ ಅವರಿಗೆ ಗ್ರಾಮಸ್ಥರು ಪತ್ರ ನೀಡಿದ್ದಾರೆ.

ಹಂಪಾಪುರ ಹೋಬಳಿಯ ಕ್ಯಾತನಹಳ್ಳಿ ಗ್ರಾಮ ಪಂಚಾಯಿಗೆ ಸೇರಿದ ಖಂಡೇಗೌಡನಪುರದಲ್ಲಿ 240, ಜಿ.ಬಿ.ಸರಗೂರು ಗ್ರಾಮ ಪಂಚಾಯಿತಿಗೆ ಸೇರಿದ ಕಾಡಸೂರು ಗ್ರಾಮದಲ್ಲಿ 120 ಮತದಾರರಿದ್ದಾರೆ. ಈ ಗ್ರಾಮಗಳ ನಡುವೆ ಒಂದು ಕೆರೆ ಅಡ್ಡ ಇದೆ. ಆದರೆ, ಇವರು ಒಂದೇ ಮತಗಟ್ಟೆಯಲ್ಲಿ ಮತದಾನ ಮಾಡಬೇಕು. ಗ್ರಾಮಗಳಿಗೆ ಮೂಲಸೌಕರ್ಯ ಕಲ್ಪಿಸದ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮತದಾನ ಬಹಿಷ್ಕರಿಸಲು ಒಕ್ಕೂರಲ ನಿರ್ಧಾರ ಕೈಗೊಂಡಿದ್ದಾರೆ.

ಖಂಡೇಗೌಡನಪುರ ನಿವಾಸಿ ಕುಮಾರ್ ಪ್ರತಿಕ್ರಿಯಿಸಿ, ‘ಈ ಎರಡೂ ಗ್ರಾಮದಲ್ಲಿ 3 ಕುಡಿಯುವ ನೀರಿನ ಮಿನಿ ಟ್ಯಾಂಕುಗಳಿವೆ. ವಿದ್ಯುತ್ ಇದ್ದರೆ ಮಾತ್ರ ನೀರು ಸರಬರಾಜಾಗುತ್ತದೆ. ಒವರ್ ಹೆಡ್ ಟ್ಯಾಂಕ್ ಇಲ್ಲದಿರುವುದರಿಂದ ತೀವ್ರ ತೊಂದರೆಯಾಗಿದೆ. ಚರಂಡಿ ಇಲ್ಲದೆ ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತದೆ. ಹಾಲು ಉತ್ಪಾದನೆಯಲ್ಲಿ ಗ್ರಾಮ ಮುಂದಿದ್ದು, ದೂರದ ಕಲ್ಲಹಳ್ಳಿಗೆ ಕೊಂಡೊಯ್ಯಬೇಕು. ಇದರಿಂದ ಗ್ರಾಮಸ್ಥರು ಹೈನುಗಾರಿಕೆ ನಿಲ್ಲಿಸುತ್ತಿದ್ದಾರೆ’ ಎಂದು ಪ್ರಜಾವಾಣಿಗೆ ತಿಳಿಸಿದರು.

‘ಗ್ರಾಮಕ್ಕೆ ಬಸ್ ವ್ಯವಸ್ಥೆ ಇಲ್ಲ. ವಿದ್ಯಾರ್ಥಿಗಳು ಬೆಳಿಗ್ಗೆ 6 ಗಂಟೆಗೆ ಸಿದ್ಧವಾಗಿ ಕಲ್ಲಹಳ್ಳಿಗೆ ಹೋಗಬೇಕು. ಅಲ್ಲಿಗೆ 7.30ಕ್ಕೆ ತಲುಪಬೇಕು. ಇಲ್ಲದಿದ್ದರೆ ಸಾರಿಗೆ ಬಸ್ ಹೊರಟು ಹೋಗುತ್ತದೆ. ಹೀಗಾರೆ ಮಕ್ಕಳಿಗೆ ಆ ದಿನ ಶಾಲೆಯೇ ಇಲ್ಲ. ಗ್ರಾಮದಲ್ಲಿ 5ನೇ ತರಗತಿವರೆಗೆ ಶಾಲೆ ಇದ್ದು ಮುಂದಿನ ವ್ಯಾಸಂಗಕ್ಕೆ ದೂರದ ಊರಿಗೆ ತೆರಳಬೇಕಾದ ಅನಿವಾರ್ಯತೆ ಇದೆ. ಇದರಿಂದ ಶಾಲೆಗೆ ಕಳುಹಿಸದೇ ಮನೆ ಮತ್ತು ಹೊಲದ ಕೆಲಸಕ್ಕೆ ಬಳಸಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಶಾಸಕರಾಗಿದ್ದ ಚಿಕ್ಕಮಾದು 2 ಬಾರಿ ಮಾತ್ರ ಬಂದಿದ್ದರು. ಬಂದಾಗಲೆಲ್ಲ ಅಭಿವೃದ್ಧಿ ಭರವಸೆ ನೀಡಿದ್ದರು. ಆದರೆ, ಅವು ಈಡೇರಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.‘1983ರಲ್ಲಿ ಗ್ರಾಮ ತಲೆಎತ್ತಿದೆ. ಆದರೆ, ಇಲ್ಲಿವರೆಗೆ ಯಾವುದೇ ಅಭಿವೃದ್ಧಿ ಕಂಡಿಲ್ಲ. ಗ್ರಾಮಗಳಿಗೆ ಸಂಬಂಧಿಸಿದ 2 ಎಕರೆ ಭೂಮಿ ವತ್ತುವರಿಯಾಗಿದೆ. ಅಲ್ಲದೆ, ಗ್ರಾಮದ ಕೆರೆಯ ಸುಮಾರು 16.16 ಎಕರೆ ಪ್ರದೇಶವಿದೆ. ಆದರೆ ಒತ್ತುವರಿಯಾಗಿ ಈಗ ಕೇವಲ 7 ಎಕರೆಯಷ್ಟು ಉಳಿದಿದೆ. ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ’ ಎಂದು ಆರೋಪಿಸುತ್ತಾರೆ ಗ್ರಾಮದ ಹಿರಿಯಜ್ಜ ಕಾಳಯ್ಯ.‘ಗ್ರಾಮಗಳಿಗೆ ಬಸ್‌ ಸೌಲಭ್ಯ ಸೇರಿದಂತೆ ಎಲ್ಲ ಮೂಲಸೌಕರ್ಯ ಒದಗಿಸುವುದಾಗಿ ಲಿಖಿತ ರೂಪದಲ್ಲಿ ಭರವಸೆ ನೀಡಬೇಕು. ಇಲ್ಲದಿದ್ದರೆ ಮತದಾನ ಬಹಿಷ್ಕಾರ ಮಾಡುತ್ತೇವೆ’ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT