ದೇವನಹಳ್ಳಿ: ಇಲ್ಲಿನ ವಿಹಾನ್ ಪಬ್ಲಿಕ್ ಶಾಲೆಯಲ್ಲಿ ನಡೆದ ಕುರುಬರ ಸಂಘದ ಜಿಲ್ಲಾ ನಿರ್ದೇಶಕರ ಸ್ಥಾನದ ಆಯ್ಕೆ ಚುನಾವಣೆಗೆ ಮತದಾರರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.
ಜಿಲ್ಲಾ ಕುರುಬರ ಸಂಘದ ನಿರ್ದೇಶಕ ಸಾಮಾನ್ಯ 2ಸ್ಥಾನ, 1ಮಹಿಳಾ ಮೀಸಲು ಸ್ಥಾನಕ್ಕೆ ಮತದಾನ ನಡೆಯಿತು. 2ಸಾಮಾನ್ಯ ಸ್ಥಾನಕ್ಕೆ 7ಮಂದಿ ಅಭ್ಯರ್ಥಿಗಳು,1ಮಹಿಳಾ ಮೀಸಲು ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳು ಸ್ವರ್ಧೆ ನಡೆಸಿದ್ದರು. ಒಟ್ಟು 9ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದರು.
ಆರು ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿ ಮತ್ತು ಹೊಸಕೋಟೆ ತಾಲ್ಲೂಕು ಮತದಾರರಿಗೆ ಒಂದೆ ಕಡೆ ವ್ಯವಸ್ಥೆ ಮಾಡಲಾಗಿತ್ತು. ಯಾವುದೇ ಆಹಿತಕರ ಘಟನೆ ನಡೆಯದಂತೆ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.
ಕಂಬಳಿ ಖರೀದಿ ಜೋರು: ಚುನಾವಣೆ ಮುನ್ಸೂಚನೆ ಅರಿತಿದ್ದ ಕಂಬಳಿ ತಯಾರಕರು ದ್ವಿಚಕ್ರ ವಾಹನಗಳಲ್ಲಿ ಕಂಬಳಿ ಬಂಡಲ್ಗಳನ್ನು ತಂದು ಮಾರಾಟ ಮಾಡಿದರು.
ಬಿರಿಯಾನಿಗೆ ಮುಗಿಬಿದ್ದ ಮತದಾರರು: ಮತದಾರರನ್ನು ಓಲೈಸಲು ಕೆಲ ಅಭ್ಯರ್ಥಿಗಳು ಬಿರಿಯಾನಿ ವ್ಯವಸ್ಥೆ ಮಾಡಿದ್ದರು. ಮತ್ತೊಂದು ಕಡೆ ಪ್ಯಾಕ್ ಮಾಡಿದ ಬಿರಿಯಾನಿ ವಿತರಿಸಲಾಯಿತು. ಯಾವುದೇ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗಿಂತ ಕಡಿಮೆ ಇಲ್ಲದಂತೆ ಚುನಾವಣೆ ನಡೆಯಿತು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.