ದೊಡ್ಡಬಳ್ಳಾಪುರ: ಡಬ್ಲ್ಯೂಡಬ್ಲ್ಯೂಎಫ್ ಇಂಡಿಯಾ ಸಂಸ್ಥೆಯ ವತಿಯಿಂದ ಬಾಶೆಟ್ಟಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ನೀರಿನ ಸದ್ಬಳಕೆ ಹಾಗೂ ಕೆರೆಗಳ ಮಹತ್ವ ಕುರಿತ ಅರಿವು ಕಾರ್ಯಕ್ರಮ ನಡೆಯಿತು.
ನೀರಿನ ಮೂಲಗಳ ಮಹತ್ವ, ನೀರಿನ ನೇರ ಬಳಕೆ ಹಾಗೂ ಪರೋಕ್ಷ ಬಳಕೆಗಳಲ್ಲಿ ಮಾಡಬಹುದಾದಂತಹ ಉಳಿತಾಯದ ಬಗ್ಗೆ ಅರಿವು ಮೂಡಿಸಲಾಯಿತು.
ಮಕ್ಕಳಿಗೆ ನೀರಿನ ಗುಣಮಟ್ಟ ತಿಳಿಸುವ ಪರೀಕ್ಷೆಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿಕೊಡಲಾಯಿತು.
ಸಂಸ್ಥೆಯ ಯೋಜನಾಧಿಕಾರಿ ವೈ.ಟಿ. ಲೋಹಿತ್ ಮಾತನಾಡಿ, ‘ನಾವು ನೇರವಾಗಿ ಬಳಸುವ ನೀರನ್ನಷ್ಟೇ ಮಿತವಾಗಿ ಬಳಸಿದರೆ ಸಾಲದು. ಪರೋಕ್ಷವಾಗಿ ಇನ್ನು ಹೆಚ್ಚು ನೀರನ್ನು ನಾವು ಬಳಸುತ್ತಿದ್ದೇವೆ’ ಎಂದರು.
ನವೋದಯ ಟ್ರಸ್ಟ್ನ ಆರ್.ಜನಾರ್ಧನ್ ಮಾತನಾಡಿ, ‘ಕೃಷಿಯಲ್ಲೂ ಹೆಚ್ಚು ನೀರು ಬಳಕೆಯಾಗುತ್ತಿದೆ. ಕಡಿಮೆ ನೀರಿನ ವ್ಯವಸಾಯ ಪದ್ದತಿಗಳನ್ನು ಅನುಸರಿಸಲು ರೈತರು ಮುಂದಾಗಬೇಕು. ಇದಕ್ಕೆ ಅಗತ್ಯ ಇರುವ ತಾಂತ್ರಿಕತೆಯನ್ನು ಸರ್ಕಾರ ಕೃಷಿ ಹಾಗೂ ತೋಟಗಾರಿಕೆ ಮೂಲಕ ಉಚಿವಾಗಿ ಅಳವಡಿಸಲು ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.
ಸಂಸ್ಥೆಯ ಶಶಿಕಲಾ, ಶಾಲೆಯ ಮುಖ್ಯೋಪಾದ್ಯಾಯ ವೆಂಕಟರಮಣಪ್ಪ, ಶಿಕ್ಷಕಿ ಪ್ರೇಮ, ಒಬದೇನಹಳ್ಳಿ ಸುನಿಲ್ ಹಾಗೂ ಶಾಲಾ ಮಕ್ಕಳು ಭಾಗವಹಿಸಿದ್ದರು.