ದೇವನಹಳ್ಳಿ: ‘ಪಾರಂಪರಿಕವಾಗಿ ಸಮಾಜದಲ್ಲಿ ಬೇರುಬಿಟ್ಟಿರುವ ಮೂಢನಂಬಿಕೆಗಳು ಪ್ರಸ್ತುತ ಮಾಧ್ಯಮದಲ್ಲಿ ವ್ಯಾಪಾರೀಕರಣದ ಸರಕಾಗಿವೆ’ ಎಂದು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಆತಂಕ ವ್ಯಕ್ತಪಡಿಸಿದರು.
ದೇವನಹಳ್ಳಿ ತಾಲ್ಲೂಕು ಕನ್ನಮಂಗಲ ಮಾರುತಿ ವಿದ್ಯಾ ಕೇಂದ್ರ ಆವರಣದಲ್ಲಿ ಶನಿವಾರ ರಾಜ್ಯ ವಿಜ್ಞಾನ ಪರಿಷತ್ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಹಯೋಗದಲ್ಲಿ ‘ಸಾಮಾಜಿಕ ಮೌಢ್ಯಗಳ ನಿವಾರಣೆಗಾಗಿ ವೈಜ್ಞಾನಿಕ ಚಿಂತನ ಮಂಥನ’ ಕಾರ್ಯಾಗಾರದಲ್ಲಿ ಅವರು ‘ಮೌಢ್ಯತೆ ಮತ್ತು ಮಾಧ್ಯಮ’ ಕುರಿತು ಉಪನ್ಯಾಸ ನೀಡಿದರು.
‘ಮೂಢನಂಬಿಕೆಯ ಒಳಗಡೆ ಧರ್ಮ, ದೇವರು, ರಾಜಕೀಯ, ಜಾತಿ ಅಡಗಿದೆ. ಮೂಢನಂಬಿಕೆಗಳನ್ನು ಪೋಷಿಸುತ್ತಿರುವವರು ಬಡವರಲ್ಲ, ಅಜ್ಞಾನಿಗಳಲ್ಲ. ವಿದ್ಯಾವಂತರು, ಸುಸಂಸ್ಕೃತರು, ರಾಜಕೀಯ ಧುರೀಣರು ಇದಕ್ಕೆ ಕಾರಣರಾಗಿದ್ದಾರೆ’ ಎಂದರು.
ಮೂಢನಂಬಿಕೆ ಎಂದು ಗೊತ್ತಿದ್ದರೂ ಆಕ್ಷೇಪ ಮಾಡದೆ ಜನ ಶರಣಾಗುತ್ತಾರೆ. ಈ ಕುರಿತು ಜಾಗೃತರಾಗಿ ಬದಲಾಗಬೇಕು ಎಂದರು. ಎಲ್ಲರೂ ಸೇರಿ ಮೌಢ್ಯಕ್ಕೆ ಕಡಿವಾಣ ಹಾಕಬೇಕು ಅವರು ಅಭಿಪ್ರಾಯಪಟ್ಟರು.
ವಿಜ್ಞಾನ ಪರಿಷತ್ ರಾಜ್ಯ ಗೌರವ ಕಾರ್ಯದರ್ಶಿ ಗಿರೀಶ್.ಬಿ.ಕಡ್ಲೇವಾಡ, ಉಪಾಧ್ಯಕ್ಷ ಡಾ.ಹುಲಿಕಲ್ ನಟರಾಜ್, ಎಂ.ವಿ.ಎಂ. ಸಮೂಹ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಕೆ.ಶ್ರೀನಿವಾಸ್, ನಿರ್ದೇಶಕಿ ರಾಧಾ ಶ್ರೀನಿವಾಸ್ ಉಪಸ್ಥಿತರಿದ್ದರು.