<p><strong>ಖಾನಾಪುರ (ಬೆಳಗಾವಿ ಜಿಲ್ಲೆ): </strong>ಪಶ್ಚಿಮ ಘಟ್ಟಗಳ ಸಾಲಿನ ಸಹ್ಯಾದ್ರಿ ಬೆಟ್ಟಗುಡ್ಡಗಳಿಂದ ಸುತ್ತುವರಿದಿರುವ ಮತ್ತು ನಿಸರ್ಗದತ್ತ ಅರಣ್ಯ ಪ್ರದೇಶದ ಸೌಂದರ್ಯ ಹೊಂದಿರುವ ಅಸೋಗಾ ಈ ಭಾಗದ ಪ್ರಮುಖ ಪ್ರವಾಸಿ ತಾಣವಾಗಿ ಹೊರಹೊಮ್ಮಿದೆ.</p>.<p>ಅಸೋಗಾ ಮಲಪ್ರಭಾ ನದಿತೀರದಲ್ಲಿರುವ ಪುಟ್ಟ ಗ್ರಾಮ. ಗ್ರಾಮದ ಉತ್ತರ ದಿಕ್ಕಿನಲ್ಲಿ ಅರ್ಧ ಕಿ.ಮೀ. ದೂರದಲ್ಲಿ ನದಿ ಹರಿಯುತ್ತದೆ. ಈ ನದಿ ತೀರದಲ್ಲಿ ಪುರಾತನ ಕಾಲದ ರಾಮಲಿಂಗೇಶ್ವರ ದೇವಾಲಯವಿದೆ. ಸ್ಥಳೀಯರು ಹೇಳುವ ಪ್ರಕಾರ, ಈ ದೇವಸ್ಥಾನ ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ರಾಮಾಯಣದ ಕಾಲದಲ್ಲಿ ಸೀತೆಯನ್ನು ಹುಡುಕುತ್ತಾ ಸಂಚರಿಸುತ್ತಿದ್ದ ರಾಮ ಮಲಪ್ರಭಾ ತೀರದಲ್ಲಿ ಕೆಲ ಕಾಲ ತಂಗಿದ್ದ. ಆಗ ರಾಮ ನದಿ ತೀರದಲ್ಲಿ ಈಶ್ವರಲಿಂಗ ಪ್ರತಿಷ್ಠಾಪಿಸಿ ಪೂಜಿಸಿದ್ದ ಎನ್ನುವುದು ಜನರ ನಂಬಿಕೆಯಾಗಿದೆ ಹಾಗೂ ಮಾತಾಗಿದೆ. ಅಂದಿನಿಂದ ಈ ಭಾಗದಲ್ಲಿ ರಾಮಲಿಂಗೇಶ್ವರ ದೇವಸ್ಥಾನ ನಿರ್ಮಾಣಗೊಂಡಿದೆ.</p>.<p class="Subhead"><strong>ಶಿವರಾತ್ರಿ ಜೋರು:</strong></p>.<p>‘ಈ ರಾಮಲಿಂಗೇಶ್ವರ ದೈವ ಕೃಪೆ ಅರಸಿ ಬರುವ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತಾನೆ’ ಎಂಬ ಪ್ರತೀತಿ ಇದೆ. ಪ್ರತಿ ವರ್ಷ ಸಂಕ್ರಮಣ, ಮಹಾಶಿವರಾತ್ರಿ ದಿನದಂದು ಈ ದೇವಾಲಯದಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯುತ್ತವೆ. ಆಗ ರಾಮಲಿಂಗೇಶ್ವರನ ಸಾವಿರಾರು ಭಕ್ತರು ಸೇರುವ ಕಾರಣ ದೊಡ್ಡ ಪ್ರಮಾಣದ ಜಾತ್ರೆ ನಡೆಯುತ್ತದೆ.</p>.<p>ನದಿತೀರದಲ್ಲಿ ಪ್ರಕೃತಿ ನಿರ್ಮಿತ ಸಾಮಾನ್ಯ ಗಾತ್ರದ ಬಂಡೆಗಲ್ಲುಗಳ ಮಧ್ಯದಲ್ಲಿ ನದಿಯ ನೀರು ಮಂಜುಳ ನಿನಾದದಿಂದ ಹರಿಯುತ್ತಿರುವ ದೃಶ್ಯ ಈ ತಾಣದ ಪ್ರಮುಖ ಆಕರ್ಷಣೆ. ಈ ಕಾರಣಕ್ಕಾಗಿಯೇ ನದಿಯ ಮಧ್ಯೆ ಇರುವ ಬಂಡೆಗಲ್ಲುಗಳ ಮೇಲೆ ಕುಳಿತು ಧುಮ್ಮಿಕ್ಕಿ ಹರಿಯುವ ನದಿಯ ಅಂದವನ್ನು ಕಣ್ತುಂಬಿಕೊಳ್ಳಲು ಬರುವ ಪ್ರವಾಸಿಗರೇ ಹೆಚ್ಚು.</p>.<p class="Subhead"><strong>ಹಾಡಿನ ಚಿತ್ರೀಕರಣ:</strong></p>.<p>ಐದು ದಶಕಗಳ ಹಿಂದೆ ಹಿಂದಿ ಚಲನಚಿತ್ರ ನಿರ್ದೇಶಕ ಹೃಷಿಕೇಶ್ ಮುಖರ್ಜಿ ನಿರ್ದೇಶನದ ಮತ್ತು ಬಾಲಿವುಡ್ ನಟ ಅಮಿತಾಬ್ ಬಚ್ಚನ್-ಜಯಾ ಬಾಧುರಿ ಅಭಿನಯದ ‘ಅಭಿಮಾನ್’ ಎಂಬ ಹಿಂದಿ ಚಲನಚಿತ್ರ ಈ ನದಿತೀರದಲ್ಲಿ ಚಿತ್ರೀಕರಣಗೊಂಡಿದೆ. ಅಭಿಮಾನ್ ಚಿತ್ರದಲ್ಲಿರುವ ‘ನದಿಯಾ ಕಿನಾರೆ’ ಎಂಬ ಯುಗಳಗೀತೆಯಲ್ಲಿ ಮಲಪ್ರಭಾ ನದಿಯ ಸೊಬಗನ್ನು ಚಿತ್ರೀಕರಿಸಲಾಗಿದೆ.</p>.<p>ಅಸೋಗಾ ಖಾನಾಪುರದಿಂದ ಪಶ್ಚಿಮ ದಿಕ್ಕಿನಲ್ಲಿ 4 ಕಿ.ಮೀ. ದೂರದಲ್ಲಿದೆ. ಉತ್ತಮ ರಸ್ತೆ ಸಂಪರ್ಕ ಇದೆ. ಆದರೆ, ಬಸ್ ಸೌಲಭ್ಯವಿಲ್ಲ.<br />ಊಟ-ಉಪಾಹಾರದ ವ್ಯವಸ್ಥೆ ಇಲ್ಲ. ಖಾನಾಪುರದಿಂದ ಹೋಗಿಬರಲು ಖಾಸಗಿ ವಾಹನಗಳು ಸಿಗುತ್ತವೆ.</p>.<p>ಮುಜರಾಯಿ ಇಲಾಖೆಯ ಅಧೀನದಲ್ಲಿರುವ ರಾಮಲಿಂಗೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ, ಅಭಿಷೇಕ, ಅರ್ಚನೆ ಮಾಡಿಸಬಹುದು. ಭಕ್ತರಿಗೆ, ಪ್ರಕೃತಿಯ ಮಡಿಲಲ್ಲಿ ಕೆಲ ಸಮಯ ಕಳೆಯಲು ಬಯಸುವವರಿಗೆ, ಪರಿಸರಪ್ರಿಯರಿಗೆ, ಪ್ರವಾಸಿಗರಿಗೆ, ಚಾರಣಿಗರಿಗೆ, ಮಕ್ಕಳಿಗೆ ಮುದ ನೀಡುವ ತಾಣ ಇದಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಖಾನಾಪುರ (ಬೆಳಗಾವಿ ಜಿಲ್ಲೆ): </strong>ಪಶ್ಚಿಮ ಘಟ್ಟಗಳ ಸಾಲಿನ ಸಹ್ಯಾದ್ರಿ ಬೆಟ್ಟಗುಡ್ಡಗಳಿಂದ ಸುತ್ತುವರಿದಿರುವ ಮತ್ತು ನಿಸರ್ಗದತ್ತ ಅರಣ್ಯ ಪ್ರದೇಶದ ಸೌಂದರ್ಯ ಹೊಂದಿರುವ ಅಸೋಗಾ ಈ ಭಾಗದ ಪ್ರಮುಖ ಪ್ರವಾಸಿ ತಾಣವಾಗಿ ಹೊರಹೊಮ್ಮಿದೆ.</p>.<p>ಅಸೋಗಾ ಮಲಪ್ರಭಾ ನದಿತೀರದಲ್ಲಿರುವ ಪುಟ್ಟ ಗ್ರಾಮ. ಗ್ರಾಮದ ಉತ್ತರ ದಿಕ್ಕಿನಲ್ಲಿ ಅರ್ಧ ಕಿ.ಮೀ. ದೂರದಲ್ಲಿ ನದಿ ಹರಿಯುತ್ತದೆ. ಈ ನದಿ ತೀರದಲ್ಲಿ ಪುರಾತನ ಕಾಲದ ರಾಮಲಿಂಗೇಶ್ವರ ದೇವಾಲಯವಿದೆ. ಸ್ಥಳೀಯರು ಹೇಳುವ ಪ್ರಕಾರ, ಈ ದೇವಸ್ಥಾನ ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ರಾಮಾಯಣದ ಕಾಲದಲ್ಲಿ ಸೀತೆಯನ್ನು ಹುಡುಕುತ್ತಾ ಸಂಚರಿಸುತ್ತಿದ್ದ ರಾಮ ಮಲಪ್ರಭಾ ತೀರದಲ್ಲಿ ಕೆಲ ಕಾಲ ತಂಗಿದ್ದ. ಆಗ ರಾಮ ನದಿ ತೀರದಲ್ಲಿ ಈಶ್ವರಲಿಂಗ ಪ್ರತಿಷ್ಠಾಪಿಸಿ ಪೂಜಿಸಿದ್ದ ಎನ್ನುವುದು ಜನರ ನಂಬಿಕೆಯಾಗಿದೆ ಹಾಗೂ ಮಾತಾಗಿದೆ. ಅಂದಿನಿಂದ ಈ ಭಾಗದಲ್ಲಿ ರಾಮಲಿಂಗೇಶ್ವರ ದೇವಸ್ಥಾನ ನಿರ್ಮಾಣಗೊಂಡಿದೆ.</p>.<p class="Subhead"><strong>ಶಿವರಾತ್ರಿ ಜೋರು:</strong></p>.<p>‘ಈ ರಾಮಲಿಂಗೇಶ್ವರ ದೈವ ಕೃಪೆ ಅರಸಿ ಬರುವ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತಾನೆ’ ಎಂಬ ಪ್ರತೀತಿ ಇದೆ. ಪ್ರತಿ ವರ್ಷ ಸಂಕ್ರಮಣ, ಮಹಾಶಿವರಾತ್ರಿ ದಿನದಂದು ಈ ದೇವಾಲಯದಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯುತ್ತವೆ. ಆಗ ರಾಮಲಿಂಗೇಶ್ವರನ ಸಾವಿರಾರು ಭಕ್ತರು ಸೇರುವ ಕಾರಣ ದೊಡ್ಡ ಪ್ರಮಾಣದ ಜಾತ್ರೆ ನಡೆಯುತ್ತದೆ.</p>.<p>ನದಿತೀರದಲ್ಲಿ ಪ್ರಕೃತಿ ನಿರ್ಮಿತ ಸಾಮಾನ್ಯ ಗಾತ್ರದ ಬಂಡೆಗಲ್ಲುಗಳ ಮಧ್ಯದಲ್ಲಿ ನದಿಯ ನೀರು ಮಂಜುಳ ನಿನಾದದಿಂದ ಹರಿಯುತ್ತಿರುವ ದೃಶ್ಯ ಈ ತಾಣದ ಪ್ರಮುಖ ಆಕರ್ಷಣೆ. ಈ ಕಾರಣಕ್ಕಾಗಿಯೇ ನದಿಯ ಮಧ್ಯೆ ಇರುವ ಬಂಡೆಗಲ್ಲುಗಳ ಮೇಲೆ ಕುಳಿತು ಧುಮ್ಮಿಕ್ಕಿ ಹರಿಯುವ ನದಿಯ ಅಂದವನ್ನು ಕಣ್ತುಂಬಿಕೊಳ್ಳಲು ಬರುವ ಪ್ರವಾಸಿಗರೇ ಹೆಚ್ಚು.</p>.<p class="Subhead"><strong>ಹಾಡಿನ ಚಿತ್ರೀಕರಣ:</strong></p>.<p>ಐದು ದಶಕಗಳ ಹಿಂದೆ ಹಿಂದಿ ಚಲನಚಿತ್ರ ನಿರ್ದೇಶಕ ಹೃಷಿಕೇಶ್ ಮುಖರ್ಜಿ ನಿರ್ದೇಶನದ ಮತ್ತು ಬಾಲಿವುಡ್ ನಟ ಅಮಿತಾಬ್ ಬಚ್ಚನ್-ಜಯಾ ಬಾಧುರಿ ಅಭಿನಯದ ‘ಅಭಿಮಾನ್’ ಎಂಬ ಹಿಂದಿ ಚಲನಚಿತ್ರ ಈ ನದಿತೀರದಲ್ಲಿ ಚಿತ್ರೀಕರಣಗೊಂಡಿದೆ. ಅಭಿಮಾನ್ ಚಿತ್ರದಲ್ಲಿರುವ ‘ನದಿಯಾ ಕಿನಾರೆ’ ಎಂಬ ಯುಗಳಗೀತೆಯಲ್ಲಿ ಮಲಪ್ರಭಾ ನದಿಯ ಸೊಬಗನ್ನು ಚಿತ್ರೀಕರಿಸಲಾಗಿದೆ.</p>.<p>ಅಸೋಗಾ ಖಾನಾಪುರದಿಂದ ಪಶ್ಚಿಮ ದಿಕ್ಕಿನಲ್ಲಿ 4 ಕಿ.ಮೀ. ದೂರದಲ್ಲಿದೆ. ಉತ್ತಮ ರಸ್ತೆ ಸಂಪರ್ಕ ಇದೆ. ಆದರೆ, ಬಸ್ ಸೌಲಭ್ಯವಿಲ್ಲ.<br />ಊಟ-ಉಪಾಹಾರದ ವ್ಯವಸ್ಥೆ ಇಲ್ಲ. ಖಾನಾಪುರದಿಂದ ಹೋಗಿಬರಲು ಖಾಸಗಿ ವಾಹನಗಳು ಸಿಗುತ್ತವೆ.</p>.<p>ಮುಜರಾಯಿ ಇಲಾಖೆಯ ಅಧೀನದಲ್ಲಿರುವ ರಾಮಲಿಂಗೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ, ಅಭಿಷೇಕ, ಅರ್ಚನೆ ಮಾಡಿಸಬಹುದು. ಭಕ್ತರಿಗೆ, ಪ್ರಕೃತಿಯ ಮಡಿಲಲ್ಲಿ ಕೆಲ ಸಮಯ ಕಳೆಯಲು ಬಯಸುವವರಿಗೆ, ಪರಿಸರಪ್ರಿಯರಿಗೆ, ಪ್ರವಾಸಿಗರಿಗೆ, ಚಾರಣಿಗರಿಗೆ, ಮಕ್ಕಳಿಗೆ ಮುದ ನೀಡುವ ತಾಣ ಇದಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>