ಬೆಳಗಾವಿ: ‘ಮಹಾನಗರಕ್ಕೆ ತಕ್ಕಂತೆ ಇಲ್ಲಿ ₹ 17 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಪೊಲೀಸ್ ಆಯುಕ್ತರ ಕಚೇರಿ ನಿರ್ಮಿಸಲಾಗುವುದು’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇಲ್ಲಿನ ಕಾಲೇಜು ರಸ್ತೆಯ ಪೊಲೀಸ್ ಲೈನ್ನಲ್ಲಿ ನಗರ ಪೊಲೀಸ್ ಆಯುಕ್ತರ ಕಚೇರಿ ಕಟ್ಟಡ ನಿರ್ಮಾಣಕ್ಕೆ ಮಂಗಳವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
‘ಆಯುಕ್ತರ ಕಚೇರಿ ನಿರ್ಮಿಸಿಬೇಕು ಎಂಬುದು ಬಹಳ ದಿನಗಳ ಬೇಡಿಕೆಯಾಗಿತ್ತು. ಇದು ಈಗ ನನಸಾಗುತ್ತಿದೆ. ನಗರದ ಮಧ್ಯದಲ್ಲೆ ಎರಡು ಎಕರೆ ಜಾಗವೂ ಸಿಕ್ಕಿದೆ. ಸುಸಜ್ಜಿತ ಕಟ್ಟಡ ಮೈದಳೆಯಲಿದೆ. ನಿಗದಿತ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು’ ಎಂದರು.
ನಕ್ಷೆ ವೀಕ್ಷಿಸಿದ ಅವರು, ಗುತ್ತಿಗೆದಾರರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ‘ನೀವು ಕಟ್ಟುತ್ತಿರುವುದು ಹಾಸ್ಟೆಲ್ ಅಲ್ಲ. ಪೊಲೀಸ್ ಆಯುಕ್ತರ ಕಚೇರಿ ಎನ್ನುವುದನ್ನು ಮರೆಯಬಾರದು’ ಎಂದು ಸೂಚಿಸಿದರು. ಸಣ್ಣಪುಟ್ಟ ಬದಲಾವಣೆಗೆ ನಿರ್ದೇಶನ ನೀಡಿದರು.
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ಅನಿಲ್ ಬೆನಕೆ, ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ, ಕೆಎಸ್ಆರ್ಪಿ ಎಡಿಜಿಪಿ ಅಲೋಕ್ ಕುಮಾರ್, ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್, ನಗರ ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್, ಎಸ್ಪಿ ಲಕ್ಷ್ಮಣ ನಿಂಬರಗಿ ಇದ್ದರು.