ಅಥಣಿ: ‘ನೆರೆಯಿಂದಾಗಿ ಮನೆ ಕಳೆದುಕೊಂಡವರಿಗೆ ಕಡಿಮೆ ವೆಚ್ಚದಲ್ಲಿ ಮನೆ ಕಟ್ಟಿಕೊಡಲು ಯೋಜಿಸಿದ್ದೇನೆ’ ಎಂದು ಮಹಾರಾಷ್ಟ್ರದ ಸಾಂಗಲಿಯ ಮುಖಂಡ ಕಿಶೋರ ಠಕ್ಕ ತಿಳಿಸಿದರು.
ಇಲ್ಲಿನ ಸನ್ ಸಿಟಿ ಬಡಾವಣೆಯಲ್ಲಿ ಸಂತ್ರಸ್ತರನ್ನು ಉದ್ದೇಶಿಸಿ ಮಾತನಾಡಿದರು.
‘ನನ್ನ ಬಡಾವಣೆಯಲ್ಲಿ 50ರಿಂದ 100 ನಿವೇಶನಗಳನ್ನು ಸಂತ್ರಸ್ತರಿಗೆ ಕಾಯ್ದಿರಿಸಿದ್ದೇನೆ. ಸಾಮಾನ್ಯವಾಗಿ 30x40 ಅಳತೆಯ ನಿವೇಶನಕ್ಕೆ ₹ 3ರಿಂದ 4 ಲಕ್ಷ ಬೆಲೆ ಇದೆ. ಅದರಲ್ಲಿ ಚಿಕ್ಕದಾದ ಮನೆ ಕಟ್ಟಲು ₹ 20 ಲಕ್ಷ ಖರ್ಚಾಗುತ್ತದೆ. ನಾವು ಸಂತ್ರಸ್ತರಿಗೆ ₹ 7 ಲಕ್ಷ ವೆಚ್ಚದಲ್ಲಿ ಕಟ್ಟಿಸಿಕೊಡುತ್ತೇವೆ’ ಎಂದು ಮಾಹಿತಿ ನೀಡಿದರು.
‘ನಿವೇಶನ ಅಥಣಿ–ಸತ್ತಿ ಮಾರ್ಗದಲ್ಲಿದೆ. ಅಥಣಿ ಬಸ್ ನಿಲ್ದಾಣದಿಂದ 5 ಕಿ.ಮೀ. ದೂರದಲ್ಲಿದೆ. ನಿವೇಶನ ಹಾಗೂ ಕಟ್ಟಡ ಖರೀದಿಸುವವರಿಗೆ ಬ್ಯಾಂಕ್ನಿಂದ ಪಡೆಯುವ ಸಾಲ ಸೌಲಭ್ಯಕ್ಕೆ ಸಹಾಯ ಮಾಡಲಾಗುವುದು. ಬಡವರ ನೋವಿಗೆ ಸ್ಪಂದಿಸುವ ಉದ್ದೇಶದಿಂದ ಈ ಯೋಜನೆ ಹಮ್ಮಿಕೊಂಡಿದ್ದೇನೆ’ ಎಂದರು.