ಬೆಳಗಾವಿ: ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದಿಂದ, ಈಚೆಗೆ ನಿಧನರಾದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರಿಗೆ ನುಡಿ ನಮನ ಸಲ್ಲಿಸಲಾಯಿತು.
ಕೆಎಲ್ಇ ಸಂಸ್ಥೆ ಕಾರ್ಯಾಧ್ಯಕ್ಷ, ಅಖಿಲ ಭಾರತ ವೀರಶೈವ ಮಹಾಸಭಾ ಉಪಾಧ್ಯಕ್ಷ ಪ್ರಭಾಕರ ಕೋರೆ ಮಾತನಾಡಿ, ‘ಸುರೇಶ ಅವರು ಸತ್ಯ, ಶುದ್ಧ ಮನಸ್ಸಿನಿಂದ ಸಮಾಜ ಸೇವೆ ಮಾಡಿದರು. ವೀರಶೈವ–ಲಿಂಗಾಯತ ಸಮಾಜದ ಒಗ್ಗಟ್ಟಿಗೆ ಶ್ರಮಿಸಿದರು. ವಿಶಿಷ್ಟ ಸಂಸ್ಕೃತಿ– ಸಂಪ್ರದಾಯಗಳನ್ನು ಹೊಂದಿರುವ ನಮ್ಮ ಸಮಾಜವು ಶಾಂತಿ–ಸಾಮರಸ್ಯದಿಂದ ಇರಬೇಕೆಂದು ಬಯಸಿ ಅಭಿವೃದ್ಧಿಗೆ ಶ್ರಮಿಸಿದರು. ಎಲ್ಲರನ್ನೂ ಪ್ರೇಮದಿಂದ ಕಂಡು ಬೇಡಿಕೆಗಳಿಗೆ ಸ್ಪಂದಿಸಿದರು. ಅವರನ್ನು ಕಳೆದುಕೊಂಡು ನಾಡು ಬಡವಾಗಿದೆ’ ಎಂದು ಸ್ಮರಿಸಿದರು.
ವಿಧಾನಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ‘ಅಂಗಡಿ ಅವರು ಬಸವಾದಿ ಪ್ರಮಥರಂತೆ ಕಾಯಕ ಯೋಗಿಯಾಗಿದ್ದರು’ ಎಂದರು.
ವಕೀಲ ಮಾರುತಿ ಝಿರಲಿ ಮಾತನಾಡಿ, ‘ಮನೆ ಗೆದ್ದು ಮಾರು ಗೆದ್ದ ಶರಣರವರು. ಸಮಾಜವನ್ನು ಕುಟುಂಬದಂತೆಯೇ ಪ್ರೀತಿಸಿದರು. ಸಮರ್ಥ ರಾಜಕಾರಣಿ ಕಳೆದುಕೊಂಡ ದುರ್ದೈವ ನಮ್ಮದಾಗಿದೆ’ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ, ಕಾರಂಜಿ ಮಠದ ಗುರುಸಿದ್ಧ ಸ್ವಾಮೀಜಿ, ಪತ್ರಕರ್ತ ಮುರುಗೇಶ ಶಿವಪೂಜಿ, ಸಮಾಜ ಸೇವಕ ಚಂದ್ರಶೇಖರ ಬೆಂಬಳಗಿ ಮಾತನಾಡಿದರು.