ಬೆಳಗಾವಿ: ನಗರಕ್ಕೆ ಮಂಗಳವಾರ ಭೇಟಿ ನೀಡಿದ್ದ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರು ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ, ಪ್ರಕರಣಗಳ ಪ್ರಗತಿ ಪರಿಶೀಲಿಸಿದರು.
‘ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಕ್ರಮ ಕೈಗೊಳ್ಳಬೇಕು. ಜನಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು’ ಎಂದು ನಿರ್ದೇಶನ ನೀಡಿದರು.
ಇದಕ್ಕೂ ಮುನ್ನ ಸಿಟಿ ಪೊಲೀಸ್ ಲೈನ್ನ ಆರ್ಎಲ್ಎಸ್ ಕಾಲೇಜಿನ ಹಿಂಭಾಗದಲ್ಲಿರುವ ಇಲಾಖೆಗೆ ಸೇರಿದ ಜಾಗದಲ್ಲಿ ಹೊಸದಾಗಿ ಪೊಲೀಸ್ ಆಯುಕ್ತರ ಕಟ್ಟಡ ನಿರ್ಮಾಣಕ್ಕೆ ಯೋಜಿಸಿರುವ ಸ್ಥಳವನ್ನು ಪರಿಶೀಲಿಸಿದರು. ಶೀಘ್ರವೇ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್, ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್, ಡಿಸಿಪಿಗಳಾದ ಡಾ.ವಿಕ್ರಮ್ ಅಮಟೆ, ಸಿ.ಆರ್. ನೀಲಗಾರ ಇದ್ದರು.
ಬಳಿಕ ಕ್ಯಾಂಪ್ ಮಹಿಳಾ ಪೊಲೀಸ್ ಠಾಣೆಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದರು. ಎಸಿಪಿ ಚಂದ್ರಪ್ಪ, ಕ್ಯಾಂಪ್ ಸಿಪಿಐ ಸಂತೋಷಕುಮಾರ್ ಇದ್ದರು.
ಒನ್ ಸ್ಟಾಪ್ ಸರ್ವಿಸ್ ಸೆಂಟರ್ ಹಾಗೂ ಪೊಲೀಸ್ ಕ್ಯಾಂಟೀನ್ ಅನ್ನೂ ವೀಕ್ಷಿಸಿದರು.