ಬೆಳಗಾವಿ: ‘ಅಧಿಕಾರಿಗಳು ನನ್ನ ಹಿಂದೆ ಸುತ್ತುವುದನ್ನು ಬಿಟ್ಟು, ಪ್ರವಾಹದಿಂದ ತತ್ತರಿಸಿರುವ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಳ್ಳಬೇಕು’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೂಚಿಸಿದರು.
ಇಲ್ಲಿನ ಖಾಸಬಾಗದ ಸಾಯಿ ಭವನದಲ್ಲಿ ಪರಿಹಾರ ಕೇಂದ್ರಕ್ಕೆ ಬುಧವಾರ ರಾತ್ರಿ ಭೇಟಿ ನೀಡಿದ ಅವರು ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದರು.
‘ಕೆಲವೇ ಹಿರಿಯ ಅಧಿಕಾರಿಗಳು ಮಾತ್ರ ನನ್ನ ಜೊತೆಗಿರಬೇಕು. ಉಳಿದವರು ವಹಿಸಿದ ಕೆಲಸವನ್ನು ಮುಂದುವರಿಸಬೇಕು. ಸಂತ್ರಸ್ತರಿಗೆ ನೆರವಾಗಲು ಸಮರೋಪಾದಿಯಲ್ಲಿ ಶ್ರಮಿಸಬೇಕು’ ಎಂದು ತಿಳಿಸಿದರು.