ಬೆಳಗಾವಿ: ‘ಗುತ್ತಿಗೆದಾರರ ಬಳಿ ಕೋಟ್ಯಂತರ ಹಣ ಸಿಕ್ಕಿದ್ದರಿಂದ ಕಾಂಗ್ರೆಸ್ ಸರ್ಕಾರದ ಮುಖವಾಡ ಬಯಲಾಗಿದೆ. ಇಂಥ ಸರ್ಕಾರವನ್ನು ಜನರೇ ಹುಚ್ಚುನಾಯಿಗೆ ಕಲ್ಲು ಹೊಡೆದಂತೆ ಹೊಡೆದು ಉರುಳಿಸುತ್ತಾರೆ’ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಹೇಳಿದರು.
ಸಮೀಪದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಸಹಕಾರ ಇಲ್ಲದೇ ಗುತ್ತಿಗೆದಾರ ₹42 ಕೋಟಿ ಹಣ ಸಂಗ್ರಹಿಸಲು ಸಾಧ್ಯವಿಲ್ಲ. ಇದರ ನೈತಿಕ ಹೊಣೆ ಹೊತ್ತು ಇಬ್ಬರೂ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.
‘ಗುತ್ತಿಗೆದಾರರ ಅಸೋಸಿಯೇಷನ್ ಮುಂದೆ ಬಿಟ್ಟು ನಮ್ಮ ಸರ್ಕಾರದ ಮೇಲೆ ಶೇ 40ರ ಕಮಿಷನ್ ಆರೋಪ ಮಾಡಿದರು. ಅದರ ಲಾಭ ಮಾಡಿಕೊಂಡು ಗೆದ್ದರು. ಆದರೆ, ಈಗ ಅವರದೇ ಸರ್ಕಾರದಲ್ಲಿ ಮೂಟೆಗಟ್ಟಲೇ ದುಡ್ಡು ಹೊರಬೀಳುತ್ತಿದೆ. ಬಿಜೆಪಿ ಸರ್ಕಾರದ ಮೇಲೆ ಗೂಬೆ ಕೂರಿಸಿದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಈಗ ಬಾಯಿಬಿಡಬೇಕು. ಐದು ರಾಜ್ಯಗಳ ಚುನಾವಣೆಗಾಗಿ ಗುತ್ತಿಗೆದಾರರ ಮೂಲಕ ಈ ರೀತಿ ಹಣ ಕೊಳ್ಳೆ ಹೊಡೆಯಲಾಗುತ್ತಿದೆ ಎಂಬುದನ್ನು ಒಪ್ಪಿಕೊಳ್ಳಬೇಕು’ ಎಂದೂ ಅವರು ಒತ್ತಾಯಿಸಿದರು.
‘ವಿದ್ಯುತ್ ಕಡಿತದ ಕಾರಣ ರೈತರು ರೊಚ್ಚಿಗೆದ್ದಿದ್ದಾರೆ. ನಮ್ಮ ಸರ್ಕಾರ ಇದ್ದಾಗ ಹೊರ ರಾಜ್ಯಕ್ಕೆ ಸರಬರಾಜು ಮಾಡುತ್ತಿದ್ದೇವು. ಅದರಿಂದ ₹2,500 ಕೋಟಿ ಆದಾಯ ಬರುತ್ತಿತ್ತು. ಈಗ ಅನ್ಯ ರಾಜ್ಯಗಳಿಂದಲೇ ವಿದ್ಯುತ್ ಖರೀದಿಸುವ ದುಸ್ಥಿತಿ ಬಂದಿದೆ’ ಎಂದು ಟೀಕಿಸಿದರು.
‘ಘಟಪ್ರಭಾದಲ್ಲಿ ಮಹಿಳೆಗೆ ಚಪ್ಪಲಿ ಹಾರ ಹಾಕಿ ಅಮಾನುಷವಾಗಿ ನಡೆದುಕೊಳ್ಳಲಾಗಿದೆ. ಪೊಲೀಸರ ಎದುರಲ್ಲೇ ಇದು ನಡೆದಿದೆ. ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬುದಕ್ಕೆ ಇದಕ್ಕಿಂತ ಉದಾಹರಣೆ ಬೇಕಿಲ್ಲ’ ಎಂದರು.