ಫೇಸ್ಬುಕ್ ಲೈವ್ ಕಾರ್ಯಕ್ರಮದ ಆಶಯ, ಗುರಿ, ಉದ್ದೇಶ ಮತ್ತು ಶರಣರ ಬಗ್ಗೆ ಬೀಮನಗೌಡ ವಿವರಿಸಿದರು. ಬಳಿಕ ವಿಜಯಪುರ ಬಿಎಲ್ಡಿ ಸಂಸ್ಥೆಯ ಪ್ರಚಾರ ಅಧಿಕಾರಿ ಮಹಾಂತೇಶ ಬಿರಾದಾರ ಮಾತನಾಡಿದರು. ಕಲಬುರ್ಗಿ ಜಿಲ್ಲೆ ಪತ್ರಕರ್ತ ಶಿವರಂಜನ್ ಸತ್ಯಂಪೇಟ, ‘ಬಸವಣ್ಣ ಲೋಕ ಸೂರ್ಯ. ಸೂರ್ಯ ಇರುವಲ್ಲಿ ಕತ್ತಲೆ ಹೇಗೆ ತನಗೆ ತಾನೆ ಕಾಲ್ತೆಗೆಯುವುದೋ ಹಾಗೆ ಬಸವಣ್ಣ ಇರುವಲ್ಲಿ ಜಾತಿ ಸೂತಕ ಇಲ್ಲ. ಮತ ಮೌಢ್ಯಗಳಿಲ್ಲ. ಮೇಲು-ಕೀಳುಗಳಿಲ್ಲ. ಬಡವ-ಬಲ್ಲಿದನಿಲ್ಲ, ಜಾಣ-ದಡ್ಡನಿಲ್ಲ, ಸ್ತ್ರೀ-ಪುರುಷ ಎಂಬ ತಾರತಮ್ಯವಿಲ್ಲ. ಲಂಚ–ವಂಚನೆಗಳಿಲ್ಲ, ದರ್ಪ-ದಬ್ಬಾಳಿಕೆ ಇಲ್ಲ. ಇಲ್ಲಿ ಸರ್ವರಿಗೂ ಸಮಬಾಳು; ಸರ್ವರಿಗೂ ಸಮಪಾಲು’ ಎಂದರು.