ಬೆಳಗಾವಿ: ‘ಗೋವಾ ರಾಜ್ಯದಲ್ಲಿ ಮಾರಾಟಕ್ಕೆಂದು ನಮೂದಿಸಿರುವ’ ಮದ್ಯದ ಬಾಟಲಿಗಳನ್ನು ಸಾಗಿಸುತ್ತಿದ್ದ ವ್ಯಕ್ತಿಯನ್ನು ನಿಪ್ಪಾಣಿ ತಾಲ್ಲೂಕು ರಾಷ್ಟ್ರೀಯ ಹೆದ್ದಾರಿ–4ರ ಸಮೀಪದಲ್ಲಿ ಬಂಧಿಸಿರುವ ಅಬಕಾರಿ ಠಾಣೆ ಪೊಲೀಸರು, 52.250 ಲೀಟರ್ ಮದ್ಯ ಹಾಗೂ ಕಾರು ವಶಕ್ಕೆ ಪಡೆದಿದ್ದಾರೆ.
ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಚಂದಗಡ ತಾಲ್ಲೂಕಿನ ಪಿಲ್ನಿಯ ಲಕ್ಷ್ಮಣ ಬಾಳು ಚವಾಣ (34) ಬಂಧಿತ.
ಅವರು ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ ಸಾಗಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅಬಕಾರಿ ಪೊಲೀಸರು ತಿಳಿಸಿದ್ದಾರೆ.
ಬೆಳಗಾವಿ ವಿಭಾಗದ ಅಬಕಾರಿ ಜಂಟಿ ಆಯುಕ್ತ ವೈ. ಮಂಜುನಾಥ, ಉಪ ಆಯುಕ್ತ ಬಸವರಾಜ ಸಂದಿಗೌಡ ಮಾರ್ಗದರ್ಶನದಲ್ಲಿ ಚಿಕ್ಕೋಡಿ ವಿಭಾಗದ ಅಬಕಾರಿ ಉಪ ಅಧೀಕ್ಷಕ ವಿಜಯಕುಮಾರ ಜೆ. ಹಿರೇಮಠ, ಅಬಕಾರಿ ಇನ್ಸ್ಪೆಕ್ಟರ್ ಬಸವರಾಜ ಕರಮಣ್ಣನವರ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ನಡೆಸಿದ್ದಾರೆ.