ಬೆಳಗಾವಿ: ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ‘ಲೋಕದರ್ಶನ’ ಕನ್ನಡ ದಿನಪತ್ರಿಕೆಯ ಸಂಸ್ಥಾಪಕ ಎಂ.ಬಿ. ದೇಸಾಯಿ (97) ಸೋಮವಾರ ಇಲ್ಲಿನ ಗೋಕುಲನಗರದ ಸ್ವಗೃಹದಲ್ಲಿ ನಿಧನರಾದರು.
ಅವರಿಗೆ ಪತ್ನಿ, ಇಬ್ಬರು ಪುತ್ರರು ಮತ್ತು ಪುತ್ರಿ ಇದ್ದಾರೆ.
16ನೇ ವಯಸ್ಸಿನಲ್ಲೇ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಕಾರಾಗೃಹವಾಸ ಅನುಭವಿಸಿದ್ದರು. 1956ರಲ್ಲಿ ‘ದರ್ಶನ’ ಎಂಬ ವಾರಪತ್ರಿಕೆ ಆರಂಭಿಸಿ 6 ವರ್ಷಗಳ ಬಳಿಕ 1963ರಲ್ಲಿ ಅದನ್ನೇ ‘ಲೋಕದರ್ಶನ’ ದೈನಿಕವಾಗಿ ಪರಿವರ್ತಿಸಿ ಐವತ್ತು ವರ್ಷಗಳಿಗೂ ಹೆಚ್ಚು ಕಾಲ ಸಂಪಾದಕರಾಗಿದ್ದರು. ಒಂದೂವರೆ ದಶಕದಿಂದ ಅವರ ಪುತ್ರ ಶರತ್ ದೇಸಾಯಿ ಸಂಪಾದಕರಾಗಿದ್ದಾರೆ.
ತಾಲ್ಲೂಕಿನ ಹುದಲಿಯ ಕೃಷಿ ಕುಟುಂಬದಲ್ಲಿ ಜನಿಸಿದ ಅವರು, ಗಾಂಧೀಜಿ ಒಡನಾಟ ಹೊಂದಿದ್ದರು. ಗಡಿ ಬೆಳಗಾವಿಯಲ್ಲಿ ಅರವತ್ತು ವರ್ಷಗಳ ಹಿಂದೆಯೇ ಕನ್ನಡಿಗರ ಹೋರಾಟಕ್ಕೆ ಧ್ವನಿಯಾಗುವಂತೆ ಪತ್ರಿಕೆ ನಡೆಸಿದವರು. ಕರ್ನಾಟಕ ರಾಜ್ಯೋತ್ಸವ ಸೇರಿ ಹಲವು ಪ್ರಶಸ್ತಿಗಳಿಗೆ ಅವರು ಭಾಜನವಾಗಿದ್ದರು.