ಬೆಳಗಾವಿ: ಸರ್ಕಾರವು ಸಭೆ, ಸಮಾರಂಭಗಳನ್ನು ನಿರ್ಬಂಧಿಸಿರುವ ಹಿನ್ನೆಲೆಯಲ್ಲಿ ವಿಧಾನ ಪರಿಷತ್ತಿನ ಸದಸ್ಯ, ಸರ್ಕಾರದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಅವರು ತಮ್ಮ ಮಗಳ ಮದುವೆಯ ಆರತಕ್ಷತೆಯನ್ನು ರದ್ದುಪಡಿಸಿದ್ದಾರೆ. ಮದುವೆಯನ್ನು ಸರಳವಾಗಿ ಮಾಡಲು ನಿರ್ಧರಿಸಿದ್ದಾರೆ.
ಪುತ್ರಿ ಡಾ.ಪೂಜಾ ಹಾಗೂ ಡಾ. ಅಜಿತ್ ಅವರ ವಿವಾಹವನ್ನು ಬೆಳಗಾವಿಯ ಖಾನಾಪುರ ರಸ್ತೆಯ ಉದ್ಯಮಬಾಗ್ದಲ್ಲಿರುವ ಶಗುನ್ ಗಾರ್ಡನ್ಸ್ನಲ್ಲಿ ಭಾನುವಾರ ಆಯೋಜಿಸಿದ್ದಾರೆ. ಭಾನುವಾರ ಸಂಜೆ ಬೆಳಗಾವಿಯ ಸಿ.ಪಿ.ಎಡ್ ಕಾಲೇಜು ಮೈದಾನದಲ್ಲಿ ಹಾಗೂ ಮಂಗಳವಾರ ಸಂಜೆ ಚಿಕ್ಕೋಡಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಆರತಕ್ಷತೆಯನ್ನು ಅವರು ರದ್ದುಪಡಿಸಿದ್ದಾರೆ.
ಅತ್ಯಂತ ಸರಳವಾಗಿ ಮದುವೆ ಆಚರಿಸುವುದಾಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಿ.ಎಂ. ಭಾಗಿ
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಪ್ರಮುಖ ರಾಜಕೀಯ ನಾಯಕರು, ಶಾಸಕರು ಮದುವೆ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಈ ಮೊದಲು ಕಾರ್ಯಕ್ರಮ ರದ್ದುಪಡಿಸಿದ್ದ ಯಡಿಯೂರಪ್ಪ, ಮಹಾಂತೇಶ ಕವಟಗಿಮಠ ಅವರ ಒತ್ತಾಯಕ್ಕೆ ಮಣಿದು ಬರುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.