ಬೆಳಗಾವಿ: ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಕೆಎಂಎಫ್) ನಿರ್ದೇಶಕರ ಸ್ಥಾನಗಳಿಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಶಾಸಕ ರಮೇಶ ಜಾರಕಿಹೊಳಿ ಅವರ ಪುತ್ರ ಅಮರನಾಥ ಗೋಕಾಕ ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇವರ ಜೊತೆ ರಾಯಬಾಗದಿಂದ ವಿವೇಕರಾವ ಪಾಟೀಲ, ಮೂಡಲಗಿಯಿಂದ ಮಲ್ಲಪ್ಪ ಪಾಟೀಲ, ಸವದತ್ತಿಯಿಂದ ಸೋಮಲಿಂಗಪ್ಪ ಮುಗಳಿ, ಕಾಗವಾಡದಿಂದ ಬಾಬೂರಾವ ವಾಗ್ಮೋಡಿ, ಹುಕ್ಕೇರಿಯಿಂದ ರಾಯಪ್ಪ ಡೋಂಗ ಹಾಗೂ ನಾಗನೂರದಿಂದ ಖಾನಪ್ಪಗೋಳ ಅವರು ಕೂಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಖಾನಾಪುರ, ರಾಮದುರ್ಗ, ಕಿತ್ತೂರು, ಬೈಲಹೊಂಗಲ, ಅಥಣಿ, ಚಿಕ್ಕೋಡಿ ಹಾಗೂ ಬೆಳಗಾವಿ ನಿರ್ದೇಶಕರ ಸ್ಥಾನಗಳಿಗಾಗಿ ಇದೇ 28ರಂದು ಚುನಾವಣೆ ನಡೆಯಲಿದೆ.
ಅಧ್ಯಕ್ಷ ಸ್ಥಾನಕ್ಕೆ ಯತ್ನ?
ರಾಜಕೀಯ ಪ್ರವೇಶದ ಮೊದಲ ಹಂತವಾಗಿ ಅಮರನಾಥ ಅವರನ್ನು ಕೆಎಂಎಫ್ಗೆ ಕರೆತರಲಾಗಿದೆ. ಅಮರನಾಥ ಚಿಕ್ಕಪ್ಪ ಹಾಗೂ ಅರಭಾವಿ ಶಾಸಕರೂ ಆದ ಬಾಲಚಂದ್ರ ಜಾರಕಿಹೊಳಿ ಒಕ್ಕೂಟದಲ್ಲಿ ಪ್ರಾಬಲ್ಯ ಹೊಂದಿದ್ದಾರೆ. ಅಮರನಾಥ ಅವರನ್ನು ಅಧ್ಯಕ್ಷರನ್ನಾಗಿಸಲು ಅವರು ಪ್ರಯತ್ನಿಸಬಹುದು ಎಂದು ಹೇಳಲಾಗುತ್ತಿದೆ.