ಬೆಳಗಾವಿ: ಇಲ್ಲಿನ ಜಾಧವ ನಗರದಲ್ಲಿ ಶುಕ್ರವಾರ ಮಧ್ಯಾಹ್ನ ಚಿರತೆ ದಾಳಿ ಮಾಡಿದ್ದು, ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ.ನಗರದ ಮಧ್ಯ ಭಾಗದಲ್ಲಿಯೇ ಚಿರತೆ ನುಗ್ಗಿದ್ದು, ಜನರನ್ನು ಬೆಚ್ಚಿಬೀಳಿಸಿದೆ.
ಜಾಧವ ನಗರದಲ್ಲಿ ಕಟ್ಟಡ ಕೆಲಸ ಮಾಡುತ್ತಿದ್ದ ಖನಗಾವಿ ಗ್ರಾಮದ ನಿವಾಸಿ ಸಿದರಾಯಿ ಲಕ್ಷ್ಮಣ ಮಿರಜಕರ್ (38) ಅವರು ಕೆಲಸದಲ್ಲಿ ನಿರತರಾದ ವೇಳೆ ಅವರ ಮೇಲೆ ಎಗರಿದ ಚಿರತೆ ಭುಜಕ್ಕೆ ಪರಚಿದೆ.
ಅಲ್ಲಿ ಜನರ ಚೀರಾಟ ಕೇಳಿದ ನಂತರಓಡಿ ಹೋಗಿ ಪೊದೆಯಲ್ಲಿ ಅವಿತುಕೊಂಡಿದೆ. ಇದೇಜಾಗದಲ್ಲಿರುವ ಯಶೋಧನ್ ಜಾಧವ ಎನ್ನುವವರ ಮನೆ ಪಕ್ಕದಲ್ಲೇ ಚಿರತೆ ಓಡಾಡಿದ್ದು, ಹೆಜ್ಜೆ ಗುರುತುಗಳೂ ಪತ್ತೆಯಾಗಿವೆ.
ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆ ಅವಿತಿರುವ ಜಾಗದ ಶೋಧ ನಡೆಸಿದರು.
ಈಚೆಗಷ್ಟೇ ಸವದತ್ತಿ, ಮುನವಳ್ಳಿ, ಚಿಕ್ಕೋಡಿ ತಾಲ್ಲೂಕಿನ ಕೆಲ ಹಳ್ಳಿಗಳಲ್ಲಿಯೂ ಚಿರತೆ ಓಡಾಡಿದ ಗುರುತುಗಳು ಪತ್ತೆಯಾಗಿದ್ದವು.
ಆದರೆ, ಈಗ ಜನವಸತಿ ಇರುವ ಪ್ರದೇಶದಲ್ಲಿಯೇ ಚಿರತೆ ಕಂಡಿದೆ.
ಚಿರತೆ ಸೆರೆಗೆ ಗದಗ ಪರಿಣತರ ತಂಡ
ಬೆಳಗಾವಿಯ ಜಾಧವ ನಗರದ ಪೊದೆಯಲ್ಲಿ ಅವಿತುಕೊಂಡ ಚಿರತೆ ಸೆರೆ ಹಿಡಿಯಲು ಗದಗದಿಂದ ಪರಿಣತರ ತಂಡವನ್ನು ಕರೆಸಲಾಗಿದೆ. ಈ ರೀತಿ ನಗರಕ್ಕೆ ನುಗ್ಗುವ ವನ್ಯಮೃಗಗಳನ್ನು ಸೆರೆ ಹಿಡಿಯುವ ಪರಿಣತ ಸಿಬ್ಬಂದಿ ಬೆಳಗಾವಿಯಲ್ಲಿ ಇಲ್ಲ. ಹೀಗಾಗಿ, ಗದಗದಿಂದ ವಿಶೇಷ ತಂಡ ಹಾಗೂ ಸಲಕರಣೆ ಕಳುಹಿಸುವಂತೆ ಅಧಿಕಾರಿಗಳು ಕೋರಿದ್ದಾರೆ.
ಜಾಧವ ನಗರದ ಮನೆಯೊಂದರ ಮುಂದೆ ಹಾಕಿದ ಸಿಸಿಟಿವಿ ಕ್ಯಾಮೆರಾದಲ್ಲಿ ಚಿರತೆ ಓಡಾಡಿದ್ದು ಕಂಡಿದೆ.
ಸ್ಥಳದಲ್ಲೇ ಬೀಡು ಬಿಟ್ಟಿರುವ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಚಿರತೆ ಮೇಲೆ ನಿಗಾ ವಹಿಸಿದೆ. ಡ್ರೋನ್ ಕ್ಯಾಮೆರಾ ಹಾರಿಸಿ ಚಿರತೆಯ ಚಲನ ವಲನ ಗಮನಿಸಲಾಗುತ್ತಿದೆ.
ಸಂಚಾರ ನಿರ್ಬಂಧ:ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೂಡ ಸ್ಥಳದಲ್ಲಿದ್ದಾರೆ. ಜಾಧವ ನಗರದ ಎರಡೂ ದಿಕ್ಕಿನಲ್ಲಿ ಜನರ ಓಡಾಟ ನಿರ್ಬಂಧಿಸಲಾಗಿದೆ. ಬ್ಯಾರಿಕೇಡ್ ಹಾಕಿ ವಾಹನ ಓಡಾಟ ನಿಲ್ಲಿಸಲಾಗಿದೆ.
ಸುತ್ತಲಿನ ಜನರಿಗೂ ಧ್ವನಿವರ್ಧಕದ ಮೂಲಕ ಎಚ್ಚರಿಕೆ ನೀಡಿದ್ದು, ಮನೆಯಿಂದ ಹೊರಬರದಂತೆ ಸೂಚಿಸಲಾಗಿದೆ.
ಕತ್ತಲಾಗುವ ಮುನ್ನ ಚಿರತೆ ಸೆರೆ ಹಿಡಿಯಲೇಬೇಕು ಎಂಬ ಯತ್ನದಲ್ಲಿ ಅರಣ್ಯ ಅಧಿಕಾರಿಗಳು ಯತ್ನ ನಡೆಸಿದ್ದಾರೆ.
ಗಾಯಗೊಂಡವರು ಆಸ್ಪತ್ರೆಗೆ:ಚಿರತೆ ಪರಚಿದ್ದರಿಂದ ಗಾಯಗೊಂಡ ಇಬ್ಬರು ಕಟ್ಟಡ ಕಾರ್ಮಿಕರಿಗೆ ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು.
ಚಿರತೆ ಒಬ್ಬರ ಬಲಭುಜಕ್ಕೆ ಪರಚಿದ್ದರಿಂದ ರಕ್ತ ಬಂದು ಗಾಯವಾಗಿದೆ. ಇನ್ನೊಬ್ಬರ ಮೇಲೆ ದಾಳಿಗೆ ಮಾಡಿದ್ದರೂ ಅವರಿಗೆ ಹೆಚ್ಚಿನ ಗಾಯಗಳಾಗಿಲ್ಲ.
ಕಟ್ಟಡ ಕೆಲಸ ಮಾಡುತ್ತಿದ್ದವರ ಬೆನ್ನಿನ ಹಿಂದೆ ಬಂದ ಚಿರತೆ ಮೇಲೆರಗಿತು. ಇನ್ನೂ ಕೆಲವರು ಕೆಲಸದ ಸ್ಥಳದಲ್ಲಿದ್ದರು. ಗಾಬರಿಯಾಗಿ ಏಕಾಏಕಿ ಎಲ್ಲರೂ ಚೀರಾಡಿದ್ದರಿಂದ ಚಿರತೆ ಪೊದೆಯಲ್ಲಿ ಅವಿತಿತು.
ಇತ್ತ ಕಾರ್ಮಿಕರೂ ದಿಕ್ಕಾಪಾಲಾಗಿ ಓಡಿದರು.
ಬೆಳಗಾವಿಯ ಜಾಧವ ನಗರದಲ್ಲಿ ಆಗಸ್ಟ್ 5ರಂದು ಚಿರತೆ ದಾಳಿ ಮಾಡಿದೆ. ನಗರದ ಮಧ್ಯ ಭಾಗದಲ್ಲಿಯೇ ಚಿರತೆ ನುಗ್ಗಿದ್ದು, ಜನರನ್ನು ಬೆಚ್ಚಿಬೀಳಿಸಿದೆ. ಕಟ್ಟಡ ಕೆಲಸ ಮಾಡುತ್ತಿದ್ದ ಖನಗಾವಿ ಗ್ರಾಮದ ನಿವಾಸಿ ಸಿದರಾಯಿ ಲಕ್ಷ್ಮಣ ಮಿರಜಕರ್ (38) ಗಾಯಗೊಂಡಿದ್ದಾರೆ.#LeopardAttack #Leopard #Police #Karnataka #ForestDepartment pic.twitter.com/LPDhxVT0ur
— Prajavani (@prajavani) August 5, 2022
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.