ಹುಬ್ಬಳ್ಳಿ: ಲಂಬಾಣಿ ಸಮುದಾಯದವರ ಏಳಿಗೆಗೆ ಪೂರಕವಾಗುವಂತಹ ಅನೇಕ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದಿದ್ದು, ಅವರ ಪ್ರಗತಿಗೆ ಬಿಜೆಪಿ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ನಗರದಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಬುಧವಾರ ನಡೆದ ಲಂಬಾಣಿ ಸಮುದಾಯದ ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿದರು.
ಲಂಬಾಣಿ ಸಮುದಾಯ ವಿಶಿಷ್ಟ ಸಂಸ್ಕೃತಿ ಹೊಂದಿದೆ. ತಮ್ಮ ಶ್ರಮದ ಮೂಲಕ ದೇಶದ ಏಳಿಗೆಯಲ್ಲಿ ತೊಡಗಿಸಿಕೊಂಡಿದೆ. ಲಂಬಾಣಿಗಳ ತಾಂಡಾ ಅಭಿವೃದ್ಧಿ ಪಡಿಸಬೇಕು, ಅವರ ಮಕ್ಕಳಿಗೆ ಶಿಕ್ಷಣ ನೀಡಬೇಕು. ಈ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ತಿಳಿಸಿದರು.
ಪಕ್ಷದ ಸಿದ್ಧಾಂತ ಮತ್ತು ಮೋದಿಯವರ ಅಭಿವೃದ್ಧಿ ಪರ ಕೆಲಸವನ್ನು ಮೆಚ್ಚಿ ಇದೇ ಸಂದರ್ಭದಲ್ಲಿ ಬೇರೆ ಪಕ್ಷದ ಕಾರ್ಯಕರ್ತರು ಬಿಜೆಪಿ ಸೇರ್ಪಡೆಯಾದರು.
ಸಭೆಯಲ್ಲಿ ಸಮುದಾಯದ ಪ್ರಮುಖರಾದ ಕೃಷ್ಣಾಜಿ ಚೌಹಣ, ಹರಿಲಾಲ ಪವಾರ, ಮಂಗ್ಲಪ್ಪ ಲಮಾಣಿ, ಅರ್ಜುನ ಲಮಾಣಿ, ಚಂದ್ರಶೇಖರ ಗೋಕಾಕ ಹಾಗೂ ತಾಂಡಾದ ಎಲ್ಲಾ ಪ್ರಮುಖರು ಉಪಸ್ಥಿತರಿದ್ದರು.