ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS Polls| ಜನರನ್ನು ಬಕ್ರಾ ಮಾಡಲು ಬಂದಿದ್ದೀರಾ: ಶೆಟ್ಟರ್‌ಗೆ ಹೆಬ್ಬಾಳಕರ ಪ್ರಶ್ನೆ

Published 28 ಮಾರ್ಚ್ 2024, 12:58 IST
Last Updated 28 ಮಾರ್ಚ್ 2024, 12:58 IST
ಅಕ್ಷರ ಗಾತ್ರ

ಗೋಕಾಕ (ಬೆಳಗಾವಿ ಜಿಲ್ಲೆ): ‘ಕೋವಿಡ್‌ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಗೆ ಮಂಜೂರಾಗಿದ್ದ ಆಕ್ಸಿಜನ್‌ ಸಿಲಿಂಡರ್‌ಗಳನ್ನು ಹುಬ್ಬಳ್ಳಿ– ಧಾರವಾಡ ತೆಗೆದುಕೊಂಡು ಹೋಗಿದ್ದ ಜಗದೀಶ ಶೆಟ್ಟರ್‌ ಅವರೇ, ಬೆಳಗಾವಿಗೆ ನಿಮ್ಮ ಕೊಡುಗೆ ಏನು? ಜಿಲ್ಲೆಯ ಜನಜರನ್ನು ಬಕರಾ ಮಾಡಲು ಹೊರಟಿದ್ದೀರಾ?’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಕಿಡಿ ಕಾರಿದರು.

ನಗರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಈಗ ಬಂದು ಬೆಳಗಾವಿ ನನ್ನ ಕರ್ಮಭೂಮಿ ಎಂದು ಹೇಳಿಕೊಳ್ಳುತ್ತಿದ್ದೀರಿ. ಇದನ್ನು ನಂಬಲು ನಾವೇನು ಹುಚ್ಚರೇ?’ ಎಂದೂ ಪ್ರಶ್ನಿಸಿದರು.

‘ಬೆಳಗಾವಿಗೆ ಶೆಟ್ಟರ್ ಏನು ಮಾಡಿದ್ದಾರೆ? ದೊಡ್ಡ ಜಿಲ್ಲೆ, ಜನಸಂಖ್ಯೆ ಹೆಚ್ಚಿದೆ. ಕೊರೊನಾ ಸಂದರ್ಭದಲ್ಲಿ ಜಿಲ್ಲೆಗೆ ಆಕ್ಸಿಜನ್ ಸಿಲಿಂಡರ್‌ಗಳು ಬಂದಾಗ ಇವರೇ ಅದನ್ನು ರದ್ದು ಮಾಡಿಸಿ, ತಮ್ಮ ಕ್ಷೇತ್ರಕ್ಕೆ ತರಿಸಿಕೊಂಡರು. ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದಿರಿ, ಇದು ಕರ್ಮಭೂಮಿ ಹೇಳಿಕೊಳ್ಳುವಂಥ ಯಾವ ಕೆಲಸ ಮಾಡಿದ್ದೀರಿ?’ ಎಂದರು.

‘ಹುಬ್ಬಳ್ಳಿ ಜನ ಆರು ಬಾರಿ ಅವರನ್ನು ಆಯ್ಕೆ ಮಾಡಿ ವಿಧಾನಸಭೆಗೆ ಕಳುಹಿಸಿದ್ದರು. ವಿರೋಧ ಪಕ್ಷದ ನಾಯಕರಾದರು. ಮಂತ್ರಿಯಾದರು, ಮುಖ್ಯಮಂತ್ರಿಯಾದರು, ಬಿಜೆಪಿ ಅಧ್ಯಕ್ಷರಾದರು. ಎಲ್ಲವನ್ನೂ ಅನುಭವಿಸಿದ ಅವರನ್ನು ಹುಬ್ಬಳ್ಳಿ– ಧಾರವಾಡ ಜನರೇ ಏಕೆ ಹೊರಗೆ ಹಾಕಿದ್ದಾರೆ? ದಿಢೀರ್‌ ಎಂದು ಬೆಳಗಾವಿಯನ್ನು ಕರ್ಮಭೂಮಿ ಎಂದು ಹೇಳಿಕೊಳ್ಳಲು ನಾಚಿಕೆ ಆಗಬೇಕು ಇವರಿಗೆ’ ಎಂದೂ ಕಿಡಿ ಕಾರಿದರು.

‘ಬಿಜೆಪಿ ಕಾರ್ಯಕರ್ತರೇ ‘ಗೋ ಬ್ಯಾಕ್ ಶೆಟ್ಟರ್’ ಅಭಿಯಾನ ನಡೆಸಿದ್ದಾರೆ. ಅವರ ಪಕ್ಷದ ಕಾರ್ಯಕರ್ತರ ಸ್ವಾಭಿಮಾನಕ್ಕೂ ಧಕ್ಕೆಯಾಗಿದೆ. ಮೋದಿ ಅವರು ಎಲ್ಲೋ ಹೋಗಿ ಚುನಾವಣೆಗೆ ನಿಂತಿದ್ದಾರೆ ಎಂದು ತಮ್ಮ ಬೆಳಗಾವಿ ಸ್ಪರ್ಧೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಇವರೇನು ಮೋದಿಯಷ್ಟು ದೊಡ್ಡವರಾ? ನಾಚಿಕೆಯಾಗಬೇಕು ಇವರಿಗೆ’ ಎಂದು ಜರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT