ಬೆಳಗಾವಿ: ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟ ಯೋಜನೆಯಡಿ ಕೆಲಸ ಮಾಡುವ ನೌಕರರಿಗೆ ವೇತನ ಹೆಚ್ಚಿಸಬೇಕು. ಪಿಂಚಣಿ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸಿ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನೌಕರರು ಗುರುವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ಉದ್ಯಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರ್ಯಾಲಿ ನಡೆಸಿದರು. ‘ಮಕ್ಕಳ ಅಪೌಷ್ಟಿಕತೆ ಹೋಗಲಾಡಿಸಲು ಶ್ರಮಿಸುತ್ತಿರುವ ಮಹಿಳೆಯರಿಗೆ ಸರಿಯಾದ ಸವಲತ್ತುಗಳು ಸಿಗುತ್ತಿಲ್ಲ. ಅಡುಗೆ ನೌಕರರಿಗೆ ಸಮಾನ ವೇತನ ಇಲ್ಲದೇ ನಿತ್ಯ ಸಮಸ್ಯೆ ಅನುಭವಿಸುವಂತಾಗಿದೆ. ತಿಂಗಳಿಗೆ ₹ 2600 ವೇತನ ನೀಡುತ್ತಿದ್ದು, ಇನ್ನುಳಿದ ಯಾವುದೇ ಸೌಲಭ್ಯಸಿಗದೇ ವಂಚಿರಾಗುವಂತಾಗಿದೆ’ ಎಂದು ಆರೋಪಿಸಿದರು.
‘ಅಕ್ಷರ ದಾಸೋಹ ಕಾರ್ಯಕ್ರಮದಡಿ 1.14 ಲಕ್ಷ ಬಡ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಸರಿಯಾದ ಸಂಬಳ, ಪಿಂಚಣಿ ಇಲ್ಲದೇ ಅವರು ಉಪಜೀವನ ನಡೆಸುವುದು ಕಷ್ಟಕರವಾಗಿದೆ. ಸಮಾನ ವೇತನ ಕೊಟ್ಟು ಭದ್ರತೆ ಒದಗಿಸಬೇಕು. ಹಲವು ತಿಂಗಳುಗಳ ವೇತನ ತಡೆಹಿಡಿಯಲಾಗಿದ್ದು, ಅದನ್ನು ಕೂಡಲೇ ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿದರು.
‘ಕೇಂದ್ರ, ರಾಜ್ಯ ಸರ್ಕಾರಗಳು ಪ್ರಧಾನ ಮಂತ್ರಿ ಶ್ರಮಯೋಗಿ ಮಾನಧನ್ ಪಿಂಚಣಿ ಯೋಜನೆಯಡಿ ಅಡುಗೆ ನೌಕರರಿಗೆ ಪಿಂಚಣಿ ನೀಡಲು ಮುಂದಾಗಿವೆ. ಯೋಜನೆ ಪ್ರಕಾರ 14ರಿಂದ 80 ವರ್ಷ ವಯಸ್ಸಿನವರಿಗೆ ಮಾತ್ರ ಸೌಲಭ್ಯ ಸಿಗುತ್ತದೆ. ಆದರೆ, ಹೆಚ್ಚಿನ ನೌಕರರು80 ವರ್ಷ ವಯಸ್ಸು ಮೀರಿದಿವರಿದ್ದಾರೆ. ಹೀಗಾಗಿ, ಈ ಯೋಜನೆ ಕೈಬಿಟ್ಟು ಎಲ್ಐಸಿ ಆಧಾರಿತ ಯೋಜನೆ ಜಾರಿಗೆ ತರಬೇಕು’ ಎಂದು ಒತ್ತಾಯಿಸಿದರು.
ಪ್ರಧಾನ ಕಾರ್ಯದರ್ಶಿ ಜಿ.ಎಂ. ಜೈನೇಖಾನ್, ತುಳಸಮ್ಮ ಮಾಳದಕರ, ಸುಮನ ಗಡಾದ, ಎಲ್.ಎಸ್. ನಾಯಕ, ಶಕುಂತಲಾ ಉರಣೆ, ಮಾಶಾಬಿ ಢಾಲಾಯತ್, ಸುಮತಿ ಕೊಲ್ಲಾಪುರೆ, ಭಾರತಿ ಜೋಗನ್ನವರ, ರಾಜಶ್ರೀ ಕವಳಿಕಟ್ಟಿ ಪಾಲ್ಗೊಂಡಿದ್ದರು.