ಬೆಳಗಾವಿ: ನೆರೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳ ಅಧ್ಯಯನಕ್ಕೆಂದು ಬಂದಿರುವ ಕೇಂದ್ರದ ಅಧಿಕಾರಿಗಳ ತಂಡ ಕಾಗವಾಡ ತಾಲ್ಲೂಕಿನ ಮಂಗಾವತಿ ಗ್ರಾಮಕ್ಕೆ ಭೇಟಿ ನೀಡದಿರುವುದನ್ನು ಖಂಡಿಸಿ ಬಿಎಸ್ಎಫ್ ಯೋಧ ರಾಜು ಕುಂಬಾರ ಕಾಗವಾಡ–ಶಿರಗುಪ್ಪಿ ಮುಖ್ಯರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.
ರಜೆ ಮೇಲೆ ಗ್ರಾಮಕ್ಕೆ ಬಂದಿದ್ದ ಅವರು, ಎನ್ಡಬ್ಯುಕೆಎಸ್ಆರ್ಟಿ ಬಸ್ ತಡೆದು ಪ್ರತಿಭಟನೆ ನಡೆಸಿದರು. ಪೊಲೀಸರೊಂದಿಗೆ ವಾಗ್ವಾದವನ್ನೂ ನಡಸಿದರು. ‘ನೆರೆಯಿಂದಾಗಿ ನಮ್ಮ ಭಾಗದಲ್ಲಿ ಬಹಳಷ್ಟು ಹಾನಿಯಾಗಿದೆ. ಅದನ್ನೂ ಪರಿಶೀಲಿಸಬೇಕು. ಜನರಿಗೆ ಪರಿಹಾರ ಕಲ್ಪಿಸಬೇಕು’ ಎಂದು ಆಗ್ರಹಿಸಿದರು.
ವಾಹನಗಳ ಸಂಚಾರಕ್ಕೆ ತೊಂದರೆಯಾಗಿದ್ದರಿಂದ, ಪೊಲೀಸರೊಬ್ಬರು ಅವರ ಅಂಗಿಯ ಕಾಲರ್ ಹಿಡಿದು ರಸ್ತೆ ಬದಿಗೆ ಎಳೆದೊಯ್ದರು. ಈ ವೇಳೆ ಯೋಧ ಕೂಡ ಪೊಲೀಸ್ ಕಾಲರ್ ಹಿಡಿದರು. ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎಂದು ತಿಳಿದುಬಂದಿದೆ. ಸ್ಥಳೀಯರು ಅಲ್ಲಿ ನೆರೆದ್ದರಿಂದಾಗಿ ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು.
ಈ ಕುರಿತು ತಡರಾತ್ರಿವರೆಗೂ ದೂರು ದಾಖಲಾಗಿರಲಿಲ್ಲ. ‘ಹಿರಿಯ ಅಧಿಕಾರಿಗಳ ಸೂಚನೆಯಂತೆ ಕ್ರಮ ಕೈಗೊಳ್ಳಲಾಗುವುದು’ ಎಂದು ಪಿಎಸ್ಐ ತಿಳಿಸಿದರು.
ರೇಗಾಡಿದ ಜಿಲ್ಲಾಧಿಕಾರಿ:
ಚಿಕ್ಕೋಡಿ ತಾಲ್ಲೂಕಿನ ಮಾಂಜರಿ ಬಳಿ ಕೇಂದ್ರದ ಅಧಿಕಾರಿಗಳ ತಂಡದವರೊಂದಿಗೆ ಸಂಕಷ್ಟ ಹೇಳಿಕೊಳ್ಳಲು ಬಂದಿದ್ದ ಜನರನ್ನು ನಿಯಂತ್ರಿಸದಿರುವುದಕ್ಕೆ ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಪೊಲೀಸರ ಮೇಲೆ ರೇಗಾಡಿದ ಪ್ರಸಂಗ ನಡೆಯಿತು.
‘ನೀವೇನು ದನ ಕಾಯೋಕೆ ಬಂದಿದ್ದೀರಾ, ಜನರನ್ನು ಕಳುಹಿಸದೇ, ವಾಹನಗಳು ಮುಂದೆ ಹೋಗಲು ಅವಕಾಶ ಮಾಡಿಕೊಡದೇ ಏನು ಮಾಡುತ್ತಿದೀರಿ?’ ಎಂದು ಸಿಟ್ಟಿನಿಂದ ಕೇಳಿದರು.
ಇದಕ್ಕೆ ಕೆಲವು ಪತ್ರಕರ್ತರು ಆಕ್ಷೇಪ ವ್ಯಕ್ತಪಡಿಸಿದರು. ‘ನಾನು ಹೇಳಿದ್ದು ನಿಮಗಲ್ಲ, ಪೊಲೀಸರಿಗೆ’ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.