ಬೆಳಗಾವಿ: ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ಅವರು ಎಸ್ಎಫ್ಸಿಯ ₹ 2 ಕೋಟಿ ಅನುದಾನದಲ್ಲಿ ಇಲ್ಲಿನ ಚನ್ನಮ್ಮ ವೃತ್ತದಿಂದ ರಾಮಲಿಂಗಖಿಂಡ್ ಗಲ್ಲಿ, ಶನಿವಾರ ಕೂಟ, ಗಣಪತಿ ಗಲ್ಲಿ, ಪಾಂಗುಳ ಗಲ್ಲಿ, ಮಾರುತಿ ಗಲ್ಲಿ, ಕಿರ್ಲೋಸ್ಕರ್ ರಸ್ತೆವರೆಗೆ ಅಲಂಕಾರಿಕ ವಿದ್ಯುತ್ ದೀಪಗಳ ಅಳವಡಿಕೆ ಹಾಗೂ ರಸ್ತೆ ಡಾಂಬರೀಕರಣ ಕಾಮಗಾರಿಗೆ ಮಂಗಳವಾರ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ನಂತರ ಮಾತನಾಡಿ, ‘ಬೆಳಗಾವಿಯು ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಯಡಿ ಸ್ಥಾನ ಪಡೆದು ಸ್ಮಾರ್ಟ್ ಆಗುತ್ತಿದೆ. ಆ ಯೋಜನೆಯಡಿ ಅನೇಕ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಬಸವೇಶ್ವರ, ಶಿವಾಜಿ, ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ, ಗಣೇಶೋತ್ಸವ, ಕರ್ನಾಟಕ ರಾಜ್ಯೋತ್ಸವ ಮೊದಲಾದ ಉತ್ಸವಗಳ ಮೆರವಣಿಗೆ ಸಾಗುವ ಮಾರ್ಗದಲ್ಲಿ ಆಕರ್ಷಕ ವಿದ್ಯುತ್ ದೀಪಗಳನ್ನು ಅಳವಡಿಸಬೇಕು ಎನ್ನುವುದು ಜನರ ಬಹು ವರ್ಷಗಳ ಬೇಡಿಕೆಯಾಗಿತ್ತು. ಅದನ್ನು ಈಡೇರಿಸುತ್ತಿದ್ದೇನೆ’ ಎಂದರು.
‘ನಗರವನ್ನು ಮತ್ತಷ್ಟು ಸುಂದರಗೊಳಿಸಲು ಶ್ರಮಿಸಲಾಗುವುದು. ಗುಣಮಟ್ಟ ಕಾಪಾಡಿಕೊಂಡು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಸೂಚಿಸಲಾಗಿದೆ’ ಎಂದು ತಿಳಿಸಿದರು.
ಮಹಾನಗರ ಪಾಲಿಕೆ ಎಇಇ ವಿ.ಎಸ್. ಹಿರೇಮಠ, ಎಇ ಚೆನ್ನಬಸಪ್ಪ, ಗುತ್ತಿಗೆದಾರ ವೈಭವ ಬುಡಾಳೆ, ಬಿಜೆಪಿ ಉತ್ತರ ಮಂಡಳ ಅಧ್ಯಕ್ಷ ಪಾಂಡುರಂಗ ಧಾಮಣೆಕರ, ಉಪಾಧ್ಯಕ್ಷ ರಾಜು ಡೋಣ, ಗಣೇಶ ಕಾಳೆ, ಶ್ರೇಯಸ್ ನಾಕಾಡಿ, ಆದರ್ಶ ನೂಲಿ, ಗಣೇಶ ದಡೆ ಹಾಗೂ ಕಾರ್ಯಕರ್ತರು ಇದ್ದರು.