ಬೆಳಗಾವಿ: ‘ನಾನು ಮಾಡಿದ ಭಾಷಣದಲ್ಲಿ ಅವರ (ಲಕ್ಷ್ಮಿ ಹೆಬ್ಬಾಳಕರ) ಹೆಸರಿದ್ದರೆ ತೋರಿಸಿ. ಅಕ್ಕಾಬಾಯಿ ಎಂದರೆ, ಅವರೇ ಎಂದು ಏಕೆ ತಿಳಿಯುತ್ತೀರಿ? ‘ಹೆಚ್ಚುವರಿ ಪೆಗ್’ ಎಂದರೆ ಎನರ್ಜಿ ಡ್ರಿಂಕ್’ ಎಂದು ಬಿಜೆಪಿ ಮುಖಂಡ ಸಂಜಯ ಪಾಟೀಲ ಸಮರ್ಥಿಸಿಕೊಂಡರು.
ಇಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನನ್ನ ತಾಯಿ, ಪತ್ನಿ ಮತ್ತು ಮಗಳೂ ಮಹಿಳೆಯೇ. ಮಹಿಳೆಯರಿಗೆ ಹೇಗೆ ಗೌರವ ಕೊಡಬೇಕು ಎಂಬುದನ್ನು ಭಾರತೀಯ ಸಂಸ್ಕೃತಿ ಕಲಿಸಿದೆ’ ಎಂದರು.
‘ನಾನು ಲಕ್ಷ್ಮಿ ಅವರ ಹೆಸರು ತೆಗೆದುಕೊಂಡಿದ್ದರೆ ಇಲ್ಲಿಯೇ ಶಿಕ್ಷೆ ಕೊಡಿ. ಯಾರಿಗೂ ನಾನು ಅಪಮಾನಿಸಿಲ್ಲ. ತಪ್ಪು ಮಾಡಿದ್ದರೆ ಚುನಾವಣೆ ಆಯೋಗ, ಪೊಲೀಸರಿಗೆ ದೂರು ಕೊಡಿ. ಸಿಬಿಐ ತನಿಖೆ ಆಗಲಿ. ತಪ್ಪು ಸಾಬೀತಾದರೆ ಅವರು ಶಿಕ್ಷೆ ನೀಡುತ್ತಾರೆ. ಆದರೆ, ರಾತ್ರಿ ನಮ್ಮ ಮನೆ ಎದುರು ಕಾಂಗ್ರೆಸ್ನವರು ಪ್ರತಿಭಟನೆ ಮಾಡಿದ್ದು ಎಷ್ಟು ಸರಿ? ನನ್ನ ಮನೆ ಎದುರು ಪ್ರತಿಭಟಿಸಿದ್ದಕ್ಕೆ ಕ್ರಿಮಿನಲ್ ಪ್ರಕರಣ ದಾಖಲಿಸುವೆ’ ಎಂದರು.
‘ನಾನು ಹೃದ್ರೋಗಿಯಾಗಿದ್ದು, ಬೈಪಾಸ್ ಸರ್ಜರಿ ಆಗಿದೆ. ಆರೋಗ್ಯಕ್ಕೆ ಸಮಸ್ಯೆಯಾದರೆ ನನ್ನ ಗತಿ ಏನು? ಲಕ್ಷ್ಮಿ ಹೆಬ್ಬಾಳಕರ ಅವರಿಗೆ ಈ ಚುನಾವಣೆಯಲ್ಲಿ ಸೋಲಿನ ಭಯ ಶುರುವಾಗಿದೆ. ಅವರು ತಮ್ಮ ಸ್ವಾರ್ಥಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ’ ಎಂದರು