ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವದತ್ತಿ: ಬಿಜೆಪಿ ಭದ್ರಕೋಟೆ ಒಡೆದ ವಿಶ್ವಾಸ್ ವೈದ್ಯ

Published 13 ಮೇ 2023, 16:00 IST
Last Updated 13 ಮೇ 2023, 16:00 IST
ಅಕ್ಷರ ಗಾತ್ರ

ಸವದತ್ತಿ: ಬಿಜೆಪಿಯ ಭದ್ರಕೋಟೆ ಸವದತ್ತಿ ಕ್ಷೇತ್ರದಲ್ಲಿ ಹೆಚ್ಚಿನ ಅಂತರದಲ್ಲಿ ಜಯಗಳಿಸಿರುವ ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ ಅವರ ಆಪ್ತರಾಗಿರುವ ವಿಶ್ವಾಸ್ ವೈದ್ಯ ಅವರು ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಆರಂಭದಿಂದಲೂ ನಿರಂತರ ಮುನ್ನಡೆ ಸಾಧಿಸಿದ ವೈದ್ಯ ಅವರು ಮೊದಲ ಬಾರಿ ಗೆಲವಿನ ನಗೆ ಬೀರಿದ್ದು, ನಿರಂತರ ಅಧಿಕಾರ ವಂಚಿತ ಕಾಂಗ್ರೆಸ್ ಕಾರ್ಯಕರ್ತರ ಹುಮ್ಮಸ್ಸನ್ನು ಇಮ್ಮಡಿಗೊಳಿಸಿದೆ. ಪ್ರತಿಸ್ಪರ್ಧಿ ಬಿಜೆಪಿಯ ರತ್ನಾ ಮಾಮನಿ ವಿರುದ್ಧ 14,695 ಮತಗಳ ಅಂತರದಿಂದ ಗೆಲವು ದಾಖಲಿಸಿದ್ದಾರೆ.

ಮೊದಲ ಸುತ್ತಿನ ಎಣಿಕೆ ಆರಂಭದಿಂದಲೂ ಮುನ್ನಡೆ ಸಾಧಿಸುತ್ತಾ ಬಂದ ವೈದ್ಯ, ಪ್ರತಿಸ್ಪರ್ಧಿ ಬಿಜೆಪಿ ಮುನ್ನಡೆಗೆ ಅವಕಾಶವನ್ನೇ ನೀಡಲಿಲ್ಲ. ಕಾಂಗ್ರೆಸ್‌ನ ಅಭಿವೃದ್ಧಿ ಪರ್ವದ ಭರವಸೆ ಹಾಗೂ ಗ್ಯಾರೆಂಟಿ ಕಾರ್ಡ್‌ ಹೆಚ್ಚು ಅಂತರದಿಂದ ಗೆಲುವಿನ ದಡ ತಲುಪಲು ನೆರವಾಗಿದೆ. ಮೂರು ಅವಧಿಗೆ ಆಡಳಿತ ನಡೆಸಿ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಪಡಿಸದ ಕಾರಣಕ್ಕಾಗಿ ಬಿಜೆಪಿಗೆ ಅನುಕಂಪವೂ ಸಾಥ್ ನೀಡಿಲ್ಲ. ಕ್ಷೇತ್ರದಲ್ಲಿ ಪ್ರಚಾರ ನಡೆಸಿದ ಜೆಡಿಎಸ್‌ನ ಸೌರಭ ಚೋಪ್ರಾ 3ನೇ ಸ್ಥಾನಕ್ಕೆ ಕುಸಿದಿದ್ದಾರೆ. ದಿ. ಆನಂದ ಚೋಪ್ರಾ ಮತ್ತು ದಿ. ಆನಂದ ಮಾಮನಿ ಅಗಲಿಕೆಗಳು ಅನುಕಂಪವಾಗಿ ಪ್ರಭಾವ ಬೀರಲಿಲ್ಲ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ದಿ.ಆನಂದ ಮಾಮನಿ 62,480, ಪಕ್ಷೇತರ ದಿ.ಆನಂದ ಚೋಪ್ರಾ 56,189, ಹಾಗೂ ಸಧ್ಯ ಜಯಗಳಿಸಿದ ಕಾಂಗ್ರೆಸ್ಸಿನ ವಿಶ್ವಾಸ ವೈದ್ಯ 30,018 ಮತ ಪಡೆದಿದ್ದರು. ಇದರಿಂದ ಎಚ್ಚೆತ್ತ ವಿಶ್ವಾಸ್ ಅವರು ನಿರಂತರ ಪಕ್ಷ ಸಂಘಟನೆ, ಯುವಕರ ಪಡೆ ಸೇರಿ ಕ್ಷೇತ್ರದ ಜನರ ಮತ್ತು ರಾಜ್ಯ, ರಾಷ್ಟ್ರ ನಾಯಕರ ಗಮನ ತನ್ನತ್ತ ಸೆಳೆದು ಈ ಬಾರಿ ಅಧಿಕಾರಕ್ಕೇರಿದ್ದಾರೆ.

ಕ್ಷೇತ್ರದಲ್ಲಿ 20 ವರ್ಷಗಳಿಂದ ಕಾಂಗ್ರೆಸ್ ಪಕ್ಷ ಅಧಿಕಾರದಿಂದ ದೂರ ಉಳಿದು ರೋಸಿ ಹೋಗಿದ್ದ ಕಾರ್ಯಕರ್ತರಿಗೆ ಈಗ ಲಭಿಸಿದ ಗೆಲವು ಅತೀವ ಸಂಭ್ರಮವನ್ನುಂಟು ಮಾಡಿದೆ. ಸಮುದಾಯ ಬಲ ಇಲ್ಲದಿದ್ದರೂ ಕ್ಷೇತ್ರದಲ್ಲಿ ನಡೆಸಿದ ಸಾಮಾಜಿಕ ಕಾರ್ಯ, ಕಾಂಗ್ರೆಸ್‌ಗಿರುವ ದೊಡ್ಡ ಮತಬ್ಯಾಂಕ್, ಇತರ ಪಕ್ಷಗಳಿಂದಾಗದ ಅಭಿವೃದ್ಧಿ, ಕಾರ್ಯಕರ್ತರ ಕಡೆಗಣನೆ, ಬಿಜೆಪಿಯ ಲಿಂಗಾಯತ ವಿರೋಧ ಸೇರಿ ವೈದ್ಯರಿಗೆ ಪ್ರಮುಖ ಅಂಶಗಳ ಅನುಕೂಲದಿಂದಾಗಿ ಬದಲಾವಣೆ ಬಯಸಿದ ಜನ ಕಾಂಗ್ರೆಸ್ ಬೆಂಬಲಿಸಿದ್ದು ನಿಚ್ಚಳವಾಗಿದೆ.

ಕ್ಷೇತ್ರದಲ್ಲಿ ಬಿಜೆಪಿ ಪ್ರಮುಖರ ಕಡೆಗಣನೆ, ಕುಟುಂಬ ರಾಜಕಾರಣದಿಂದ ಬೇಸತ್ತ ಬಿಜೆಪಿಗರೂ ಕಾಂಗ್ರೆಸ್ ಬೆಂಬಲಿಸಿದ್ದು ಗೆಲುವಿಗೆ ಕಾರಣವಾಗಿದೆ. ಮೂರು ಬಾರಿ ಆಡಳಿತ ನಡೆಸಿ ರಾಜಕಾರಣದಲ್ಲಿ ತಮ್ಮದೇ ಆದ ಅಸ್ತಿತ್ವ ಉಳಿಸಿಕೊಳ್ಳಲಾಗದೆ ಮಾಮನಿ ಕುಟುಂಬ ಹಾಗೂ ಕಾಂಗ್ರೆಸ್ ಟಿಕೆಟ್ ಲಭಿಸದೇ ಕೌಜಲಗಿ ಕುಟುಂಬಗಳು ರಾಜಕೀಯದಿಂದ ನೇಪಥ್ಯಕ್ಕೆ ಸರಿದಂತಾಗಿದೆ. ಲಿಂಗಾಯತ ಮತ ಪಡೆಯುವಲ್ಲಿ ಬಿಜೆಪಿ ಎಡವಿದ್ದು, ಇದನ್ನು ಪರಿಪೂರ್ಣವಾಗಿ ಉಪಯೋಗಿಸಿಕೊಂಡ ಕಾಂಗ್ರೆಸ್ ಮತಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ. ಸಿದ್ದರಾಮಯ್ಯ ಸೇರಿ ರಾಜ್ಯ ನಾಯಕರುಗಳ ಅಬ್ಬರದ ಪ್ರಚಾರ ಮತ್ತು ಸಂಘಟನೆಗೆ ಹೆಚ್ಚಿನ ಮಹತ್ವ ನೀಡಿದ್ದು ಗೆಲುವಿಗೆ ಪೂರಕವಾಗಿದೆ. ಬ್ರಾಹ್ಮಣ ಸಮುದಾಯದ ವಿಶ್ವಾಸ ವೈದ್ಯ ಮುಸ್ಲಿಂ, ದಲಿತ, ಕುರುಬ, ಲಿಂಗಾಯತ ಹಾಗೂ ಇತರೆ ಸಮಾಜವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಕಾಂಗ್ರೆಸ್ ಬಂಡಾಯದಿಂದ ಬಿಜೆಪಿಗೆ ಈ ಬಾರೀ ಲಾಭವಾಗಲಿಲ್ಲ. ಎಲ್ಲ ನ್ಯೂನತೆಗಳನ್ನು ಸರಿಪಡಿಸಿ, ಮುಖಂಡರು ಒಗ್ಗಟ್ಟಿನಿಂದ ಕಾಂಗ್ರೆಸ್ ಗೆಲ್ಲಲು ಶ್ರಮಿಸಿದ್ದಾರೆ. ಜಾತಿ ಮತ ಪಂತ ಬದಿಗಿರಿಸಿ ನಾವೆಲ್ಲರೂ ಒಂದೇ ಎಂದು ಎಲ್ಲರೊಟ್ಟಿಗೆ ಕ್ಷೇತ್ರವನ್ನು ಅಭಿವೃದ್ಧಿಯತ್ತ ಸಾಗಿಸೋಣ ಎಂದು ವಿಶ್ವಾಸ ವೈದ್ಯ ಹೇಳಿದರು.

ಸವದತ್ತಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು
ಸವದತ್ತಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು
ಕಾಂಗ್ರೆಸ್ ಅಭ್ಯರ್ಥಿ ವಿಶ್ವಾಸ್ ವೈದ್ಯ ಅವರ ಪತ್ನಿ ಶೃತಿ ವೈದ್ಯ ವಿಜಯದ ಸಂಕೇತ ತೋರಿ ಸಂಭ್ರಮಿಸಿದರು
ಕಾಂಗ್ರೆಸ್ ಅಭ್ಯರ್ಥಿ ವಿಶ್ವಾಸ್ ವೈದ್ಯ ಅವರ ಪತ್ನಿ ಶೃತಿ ವೈದ್ಯ ವಿಜಯದ ಸಂಕೇತ ತೋರಿ ಸಂಭ್ರಮಿಸಿದರು
ಫಲಿತಾಂಶದ ನಂತರ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರಿಗೆ ಅಭಿನಂದನೆ ತಿಳಿಸಿದ ಸವದತ್ತಿ ಶಾಸಕ ವಿಶ್ವಾಸ್ ವೈದ್ಯ
ಫಲಿತಾಂಶದ ನಂತರ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರಿಗೆ ಅಭಿನಂದನೆ ತಿಳಿಸಿದ ಸವದತ್ತಿ ಶಾಸಕ ವಿಶ್ವಾಸ್ ವೈದ್ಯ

Quote - ನಿರೀಕ್ಷೆಗೂ ಮೀರಿ ಸವದತ್ತಿ ಜನತೆ ನನ್ನ ಆಶೀರ್ವದಿಸಿ ಗೆಲ್ಲಿಸಿದ್ದಕ್ಕೆ ಹೃದಯಪೂರ್ವಕ ಅಭಿನಂದನೆಗಳು. ನಿಮ್ಮ ಅಭಿರುಚಿಗೆ ತಕ್ಕಂತೆ ಅಭಿವೃದ್ಧಿ ಕಾರ್ಯ ನಡೆಸಲು ಸದಾ ಸಿದ್ಧ -ವಿಶ್ವಾಸ್ ವೈದ್ಯ ಸವದತ್ತಿ ಯಲ್ಲಮ್ಮ ಮತಕ್ಷೇತ್ರದ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT