ಚಿಕ್ಕೋಡಿ: ‘ಚಿಕ್ಕೋಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ 3 ಲಕ್ಷ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ವಿರುದ್ಧ ಪರಭಾವಗೊಂಡಿದ್ದಾರೆ ಎಂದು ಬರಹವಿರುವ ಪೋಸ್ಟ್ ಕಾರ್ಡ್ಗಳನ್ನು ಬಿಹಾರ ಮೂಲದವರು ಹಂಚಿಕೆ ಮಾಡಿದ ಕುರಿತು ನನಗೆ ಮಾಹಿತಿ ಇಲ್ಲ. ನಾವು ಅಭಿವೃದ್ಧಿ ಪರ ರಾಜಕೀಯ ಮಾಡುತ್ತೇವೆಯೇ ಹೊರತು, ಇಂಥ ಕ್ಷುಲ್ಲಕ ರಾಜಕಾರಣ ಮಾಡಲ್ಲ’ ಎಂದು ಚಿಕ್ಕೋಡಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.
ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ಜಾರಕಹೊಳಿ ಕುಟುಂಬ ಅಕ್ರಮ ಗಣಿಗಾರಿಕೆ ಮಾಡುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ ಷಾ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ನಮ್ಮ ಕುಟುಂಬದಲ್ಲಿ ಯಾರೂ ಗಣಿಗಾರಿಕೆ ವ್ಯವಹಾರ ಮಾಡುತ್ತಿಲ್ಲ. ಷಾ ಅವರು ಜನರಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆ’ ಎಂದು ಹರಿಹಾಯ್ದರು.
‘ನಾನು ಸಂಸದೆಯಾಗಿ ಆಯ್ಕೆಯಾದರೆ, ಚಿಕ್ಕೋಡಿಯಲ್ಲೇ ಮನೆ ಮಾಡುತ್ತೇನೆ. ಇಲ್ಲಿ ಇಂಡಸ್ಟ್ರಿಯಲ್ ಪಾರ್ಕ್ ಸ್ಥಾಪಿಸಿ, ಸಾಫ್ಟವೇರ್ ಕಂಪನಿ, ಎಂಎನ್ಸಿ ಕಂಪನಿಗಳನ್ನು ತರಲು ಯತ್ನಿಸುತ್ತೇನೆ’ ಎಂದರು.