ಬೆಳಗಾವಿ: ನಗರದ ಲಕ್ಷ್ಮೀಟೆಕಡಿಯಲ್ಲಿರುವ ಹುಕ್ಕೇರಿ ಹಿರೇಮಠದ ಶಾಖೆಗೆ ಸಂಸದೆ ಮಂಗಲಾ ಸುರೇಶ ಅಂಗಡಿ ಅವರು ಶನಿವಾರ ಭೇಟಿ ನೀಡಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಾದ ಪಡೆದರು.
ಈ ವೇಳೆ ಮಾತನಾಡಿ, ‘ಹುಕ್ಕೇರಿ ಶ್ರೀಗಳ ಮೇಲೆ ಪತಿ ದಿವಂಗತ ಸುರೇಶ ಅಂಗಡಿ ವಿಶೇಷ ಶ್ರದ್ಧೆ ಇಟ್ಟುಕೊಂಡಿದ್ದರು. ಅವರ ಮಾರ್ಗದರ್ಶನದಲ್ಲಿ ರಾಜ್ಯ ಹಾಗೂ ದೇಶದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅವರ ಕನಸನ್ನು ನಾನು ನನಸು ಮಾಡುತ್ತೇನೆ. ಜಿಲ್ಲೆಯ ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತೇನೆ’ ಎಂದು ಹೇಳಿದರು.
‘ದಿ.ಸುರೇಶ ಅಂಗಡಿ ಅವರು ಸಂಸದರಾಗಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವರಾಗಿ ಸಾಕಷ್ಟು ಜನಪರ ಕೆಲಸ ಮಾಡಿದ್ದಾರೆ. ಅವರ ಸ್ಥಾನವನ್ನು ಸಂಸದೆಯಾಗಿ ಮಂಗಲಾ ತುಂಬಲಿ. ಜಿಲ್ಲೆಯ ಜನರಿಗೆ ನ್ಯಾಯ ಒದಗಿಸಿಕೊಡಲಿ’ ಎಂದು ಸ್ವಾಮೀಜಿ ಹಾರೈಸಿದರು.