ಬೆಳಗಾವಿ: ‘ಶ್ರೀಕ್ಷೇತ್ರ ಮುಕ್ತಿಮಠದ ಪೀಠಾಧಿಪತಿ ಶಿವಸಿದ್ಧ ಸೊಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅಜ್ಞಾನ ಅಂಧಕಾರದಲ್ಲಿ ಮುಳುಗಿದ್ದ ಗ್ರಾಮಾಂತರ ಜನರನ್ನು ಸುಜ್ಞಾನದ ಬೆಳಕಿನತ್ತ ತರಲು ಹಗಲಿರುಳು ಶ್ರಮಿಸುತ್ತಿದ್ದಾರೆ’ ಎಂದು ಹುಮನಾ ಬಾದ್ನ ಇಟಗಾ ಚನ್ನಮಲ್ಲೇಶ್ವರ ಸ್ವಾಮೀಜಿ ತಿಳಿಸಿದರು.
ಮಕರ ಸಂಕ್ರಮಣದ ಅಂಗವಾಗಿ ತಾಲ್ಲೂಕಿನ ಶ್ರೀಕ್ಷೇತ್ರ ಮುಕ್ತಿಮಠದ ಜಾತ್ರಾ ಮಹೋತ್ಸವ ಕೊನೆಯ ದಿನವಾದ ಬುಧವಾರ ಭೂತ ರಾಮನ ಹಟ್ಟಿ ಗ್ರಾಮದಿಂದ ಮುಕ್ತಿ ಮಠದವರೆಗೆ ನಡೆದ ಅಡ್ಡಪಲ್ಲಕ್ಕಿ ಮಹೋತ್ಸವದ ನಂತರ ನಡೆದ ಧರ್ಮಸಭೆಯಲ್ಲಿ ಅವರು ಮಾತನಾಡಿದರು.
‘ಮಹಾಂಚಂಡಿಕಾ ಯಾಗ ಎನ್ನು ವುದು ಲೋಕದ ಲೋಪದೋಷ ಗಳಿಗೆ ದೇವರೆದುರು ಪ್ರಾಯಾಶ್ಚಿತಪಟ್ಟು ಶುದ್ದೀಕರಣ ಹೊಂದುವುದಾಗಿದೆ. ಗೋಪೂಜೆ, ಸುಹಾಸಿನಿ ಪೂಜೆ, ಮಹಾಚಂಡಿಕಾಯಾಗ, ಶಿವಪಾರ್ವತಿ ಕಲ್ಯಾಣೋತ್ಸವದಂಥ ಧಾರ್ಮಿಕ ಕಾರ್ಯಕ್ರಮಗಳ ಹಿಂದೆ ಅಪಾರ ಕೃಪಾರ್ಥ ಅಡಗಿದೆ. ಸಕಲ ಮಾನವ ಉದ್ದಾರಕ್ಕೆ ಹಾಗೂ ಪ್ರಕೃತಿಯ ಸೌಮ್ಯತೆಗಾಗಿ ಯಾಗಗಳನ್ನು ಮಾಡಲಾಗುತ್ತದೆ’ ಎಂದು ಹೇಳಿದರು.
‘ಗೋವು ಕೇವಲ ಪ್ರಾಣಿಯಲ್ಲ. ಅದು ಕಾಮಧೇನುವಾಗಿ ಮಾನವನ ಬಂಧುವಾಗಿದೆ. ಆದ್ದರಿಂದ ಗೋವು ಹತ್ಯೆ ಅಧರ್ಮ ಎಂದು ಸಾರಲಾಗುತ್ತಿದೆ. ಅಖಿಲ ಕರ್ನಾಟಕ ಪ್ರಾಣಿ ದಯಾ ಸಂಘದ ವತಿಯಿಂದ ಗೋ ರಕ್ಷಣೆ ಬಗ್ಗೆ ಹೋರಾಟ ಮಾಡುತ್ತಾ ಅರಿವು ಮೂಡಿಸುವ ಕಾರ್ಯವನ್ನು ಮುಕ್ತಿಮಠ ಮಾಡುತ್ತಿರುವುದು ಅಭಿನಂದನಾರ್ಹ’ ಎಂದು ಶ್ಲಾಘಿಸಿದರು.
ಮುಕ್ತಿಮಠದ 5 ದಿನಗಳ ಜಾತ್ರೆಗೆ ಪ್ರತಿವರ್ಷ 100 ಕ್ವಿಂಟಲ್ ಅಕ್ಕಿ ದಾನ ಮಾಡುತ್ತಿರುವ ಭಕ್ತ ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಯರಗುಪ್ಪಿಯ ಜಗದೀಶ ಬೂದಿಹಾಳ ಅವರನ್ನು ಸನ್ಮಾನಿಸಲಾಯಿತು.
ಶಿವಪಾರ್ವತಿಯರ ಕಲ್ಯಾಣೋತ್ಸವ ಸಂಭ್ರಮದಿಂದ ನೆರವೇರಿತು. ಗಂಜಿಗಟ್ಟಿಯ ವೈಜನಾಥ ಶಿವಾಚಾರ್ಯ ಸಾನ್ನಿಧ್ಯ ವಹಿಸಿದ್ದರು. ಮಮದಾಪುರದ ಮೌನಮಲ್ಲಿಕಾರ್ಜುನ ಸ್ವಾಮೀಜಿ, ಶಂಭು ಲಿಂಗ ಶಿವಾಚಾರ್ಯ ಸ್ವಾಮೀಜಿ, ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಜಗದೀಶ ಸ್ವಾಮೀಜಿ, ಈಶ್ವರ ಠಾಕೂರ, ಶಿವಣ್ಣ ಐನಾಪುರ, ರಾಮೇಶ್ವರ ಚಿಕಲೆ ಭಾಗವಹಿಸಿದ್ದರು.