ರಾಮದುರ್ಗ: ಕಳೆದ ಒಂದು ವಾರದಿಂದ ಬೀಳುತ್ತಿರುವ ಜಿಟಿಜಿಟಿ ಮಳೆಯಿಂದ ‘ಧೂಳುಯುಕ್ತ ರಾಮದುರ್ಗ’ ಪಟ್ಟಣ ಈಗ ಕೆಸರುಮಯವಾಗಿದೆ. ಇದರಿಂದ ಜನಜೀವನವೇ ಅಸ್ತವ್ಯಸ್ತಗೊಂಡಿದೆ.
ರಸ್ತೆಯಲ್ಲಿ ಸಾಗುವ ಸೈಕಲ್, ದ್ವಿಚಕ್ರವಾಹನ ಸವಾರರು ಮತ್ತು ಪಾದಚಾರಿಗಳಿಗೆ ಸಾಗಿ ಹೋಗಲೂ ಕಷ್ಟವಾಗುತ್ತಿದೆ. ಸಾಕಷ್ಟು ಜನ ಜಾರಿ ಮೈಮೇಲಿನ ಬಟ್ಟೆಗಳನ್ನು ಕೊಳೆ ಮಾಡಿಕೊಂಡು ಹೋಗುವವರೆ ಜಾಸ್ತಿ. ಮನೆಬಿಟ್ಟು ಹೋಗಿ ಬರುವ ಪಾದಚಾರಿಯು ನೀಟಾಗಿ ಮನೆ ತಲುಪುವುದಿಲ್ಲ. ಒಂದಿಲ್ಲ ಒಂದು ವಾಹನ ರಭಸವಾಗಿ ಸಾಗಿ ಮೈಯಲ್ಲ ಕೆಸರುಮಯವಾಗುವುದು ಖಂಡಿತ.
ಯುವತಿಯವರನ್ನು ಕಂಡರೆ ಪಡ್ಡೆ ಹುಡುಗರು ಮಾತ್ರ ವಾಹನವನ್ನು ಬೇಕಾಬಿಟ್ಟಿಯಾಗಿ ಓಡಿಸಿ ಕೆಸರು ಸಿಡಿಸಲು ಪ್ರಯತ್ನ ಪಡುತ್ತಾರೆ. ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳಲ್ಲಿ ಸಂಗ್ರಹಿತ ರಾಡಿ ಎಲ್ಲರಿಗೂ ಮಜ್ಜನವಾಗುತ್ತದೆ. ರಾಮದುರ್ಗ ಪಟ್ಟಣದ ಎಲ್ಲಾ ಕಡೆಗಳಲ್ಲಿ ಡಾಂಬರಯುಕ್ತ ರಸ್ತೆಗಳಿದ್ದವು. ಕಳೆದ ಒಂದು ವರ್ಷದಿಂದೀಚೆಗೆ ಒಳಚರಂಡಿ ಯೋಜನೆ ಕಾಮಗಾರಿ ಜಾರಿಯಾಗಿ ಕೆಲಸ ಪ್ರಗತಿಯಲ್ಲಿದೆ. ಇದರಿಂದ ಎಲ್ಲಾ ರಸ್ತೆಗಳಲ್ಲಿಯೂ ಮೊಣಕಾಲುದ್ದದ ಗುಂಡಿಗಳು ನಿರ್ಮಾಣಗೊಂಡಿವೆ. ಒಂದು ಕಡೆಯೂ ಡಾಂಬರಯುಕ್ತ ರಸ್ತೆಗಳು ಕಾಣುತ್ತಿಲ್ಲವಾಗಿವೆ.
ಲೋಕೋಪಯೋಗಿ ಇಲಾಖೆಯ ಮುಖ್ಯ ರಸ್ತೆಯು ಸಹ ನಿರ್ವಹಣೆಯ ಕೊರತೆಯಿಂದಾಗಿ ಗುಂಡಿಗಳ ಉಗಮಸ್ಥಾನವಾಗಿ ಪರಿಣಮಿಸಿದೆ. ಡಾ. ವೈ.ಬಿ. ಕುಲಗೋಡ ಆಸ್ಪತ್ರೆಯಿಂದ ಅಂಬೇಡ್ಕರ ಕೂಡು ರಸ್ತೆಯ ತನಕ ಎಲ್ಲರೂ ಸರ್ಕಸ್ ಮಾಡಿಕೊಂಡೆ ಸಾಗಬೇಕಿದೆ. ಇಲ್ಲಿ ವಾಹನದಲ್ಲಿ ಸಾಗಿದರೆ ಮೂಳೆ ಮುರಿದುಕೊಳ್ಳುವುದು ಅನಿವಾರ್ಯವಾಗುತ್ತದೆ. ಶಂಕರಲಿಂಗ ದೇವಸ್ಥಾನ ಮುಂಭಾಗದ ರಸ್ತೆಯಲ್ಲಿ ಸದಾ ನೀರು ಸಂಗ್ರಹವಾಗಿ ಕೊಳೆ ಜನರಿಗೆ ಮಜ್ಜನವಾಗುತ್ತಲೇ ಇರುತ್ತದೆ.
ಕೆಇಬಿ ಹತ್ತಿರ, ನೇಕಾರ ಪೇಟೆಯ ಕೆಲ ಕಡೆಗಳಲ್ಲಿ ಸ್ವಲ್ಪ ಮಳೆಯಾದರೂ ರಸ್ತೆಯಲ್ಲಿಯೇ ನೀರು ಶೇಖರಣೆಯಾಗಿರುತ್ತದೆ. ಧೂಳುಯುಕ್ತ ಪ್ರದೇಶ ಈಗ ಕೆಸರುಮಯವಾಗಿ ಮಾರ್ಪಡುತ್ತಿದೆ. ಇದರಿಂದ ಜನರು ಬೇಜಾರಾಗಿದ್ದಾರೆ. ಇಂತಹ ಪರಿಸ್ಥಿತಿಯಿಂದ ಮುಕ್ತಿ ಎಂದು ದೊರೆಯಲಿದೆ ಎಂಬುದೇ ಇಲ್ಲಿನವರ ಕೊರಗಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.