ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಯಿ–ಮಗು ಪ್ರಾಣ ರಕ್ಷಣೆಯೇ ಗುರಿ

Last Updated 20 ಡಿಸೆಂಬರ್ 2013, 6:11 IST
ಅಕ್ಷರ ಗಾತ್ರ

ಭಾರತ ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಪ್ರಗತಿ ಸಾಧಿಸಿದರೂ ತಾಯಿ ಮತ್ತು ಶಿಶು ಮರಣ ಪ್ರಮಾಣಗಳು ನಿರೀಕ್ಷಿತ ಮಟ್ಟದಲ್ಲಿ ಕಡಿಮೆಯಾಗದಿರುವುದು ಕಳವಳಕಾರಿ ಸಂಗತಿ.

ನಮ್ಮ ರಾಷ್ಟ್ರದಲ್ಲಿ ಪ್ರತಿವರ್ಷ ಸುಮಾರು 10 ಲಕ್ಷ ನಿರ್ಜೀವ ಜನನ ಹಾಗೂ ಅಷ್ಟೇ ಪ್ರಮಾಣದ ನವಜಾತ ಶಿಶುಗಳ ಮರಣ ಮತ್ತು 1 ಲಕ್ಷ ತಾಯಂದಿರ ಮರಣಗಳಾಗುತ್ತಿರುವುದು ವರದಿಯಾಗಿದೆ. ಇಂಥ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಕೆ.ಎಲ್.ಇ. ವಿಶ್ವವಿದ್ಯಾಲಯದ ಜವಾಹರಲಾಲ್‌ ನೆಹರು ವೈದ್ಯಕೀಯ ಮಹಾವಿದ್ಯಾಲಯದ ಮಹಿಳೆಯರ ಮತ್ತು ಮಕ್ಕಳ ಆರೋಗ್ಯ ಸಂಶೋಧನಾ ಘಟಕ ನಿರಂತರ ವಿನೂತನ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಎಲೆ ಮರಿಕಾಯಿಯಂತೆ ಆರೋಗ್ಯ ಸೇವೆ ನೀಡುತ್ತಿದೆ.

ಕೆ.ಎಲ್.ಇ. ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆಯವರ ಮಾರ್ಗದರ್ಶನದಂತೆ ಶಿಕಾಗೋ ಇಲಿನಾಯ್ಸ್‌ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಜೆಎನ್‌ಎಂಸಿ ಸಂಶೋಧನಾ ಘಟಕವನ್ನು 2001ರಲ್ಲಿ ಪ್ರಾರಂಭಿಸಲಾಯಿತು. ಈ ಸಂಶೋಧನಾ ಘಟಕ ಅಮೆರಿಕದ ಮಗುವಿನ ಆರೋಗ್ಯ ಮತ್ತು ಮಾನವ ಅಭಿವೃದ್ಧಿ ರಾಷ್ಟ್ರೀಯ ಸಂಸ್ಥೆಯ ಮಹಿಳೆಯರ ಮತ್ತು ಮಕ್ಕಳ ಆರೋಗ್ಯ ಸಂಶೋಧನಾ ಜಾಗತಿಕ ಜಾಲದ ಘಟಕಗಳಲ್ಲಿ ಒಂದಾಗಿದೆ. ವಿಶ್ವಮಾನ್ಯತೆ ಪಡೆದ ವಿದೇಶಿ ವಿಶ್ವವಿದ್ಯಾಲಯಗಳ ಜೊತೆಗೆ ಒಗ್ಗೂಡಿ ಉತ್ತರ ಕರ್ನಾಟಕದ ಬೆಳಗಾವಿ, ಬಾಗಲಕೋಟೆ ಹಾಗೂ ವಿಜಾಪುರ ಜಿಲ್ಲೆಗಳಲ್ಲಿ ವಿನೂತನ ಸಂಶೋಧನಾ ಯೋಜನೆಗಳನ್ನು ಜಾರಿಗೊಳಿಸುತ್ತಿದೆ.

ಉದ್ದೇಶ: ಏಷ್ಯಾ, ಆಫ್ರಿಕಾ ಮತ್ತು ದಕ್ಷಿಣ ಅಮೆರಿಕ ಖಂಡಗಳ ಆರ್ಥಿಕವಾಗಿ ಹಿಂದುಳಿದ ದೇಶಗಳಲ್ಲಿ ತಾಯಂದಿರ ಹಾಗೂ ನವಜಾತ ಶಿಶುಗಳ ಆರೋಗ್ಯ ಸುಧಾರಣೆಗೆ ಒತ್ತು ನೀಡಿ ಮರಣ ಪ್ರಮಾಣಗಳನ್ನು ಕಡಿಮೆಗೊಳಿಸುವ ಮಹತ್ತರ ಉದ್ದೇಶ ಹೊಂದಿದೆ.
ಸಂಶೋಧನೆಗಳು: ಕಳೆದ 12 ವರ್ಷಗಳಿಂದ ಮಹಿಳೆಯರ ಮತ್ತು ಮಕ್ಕಳ ಆರೋಗ್ಯ ಸಂಬಂಧಿತ ಹಲವು ವಿನೂತನ ಸಂಶೋಧನಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ ಒಳ್ಳೆಯ ಫಲಿತಾಂಶವನ್ನು ಪಡೆದುಕೊಂಡಿದೆ.

ಮಮತೆ: ಮಮತೆ ಎಂದರೆ ಮಗು ಮಾತೆ ಆರೋಗ್ಯ ಸುರಕ್ಷೆ. ಈ ಕಾರ್ಯಕ್ರಮದ ಮುಖ್ಯಉದ್ದೇಶ. ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 13 ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯ 111 ಗ್ರಾಮಗಳಲ್ಲಿ ಮಮತೆ ಕಾರ್ಯಕ್ರಮ ಅನುಷ್ಠಾನಗೊಂಡಿದೆ.

ಬ್ರೆನ್ ಹಿಟ್‌: ಜನನ ಸಮಯದಲ್ಲಿ ಉಸಿರಾಟದ ತೊಂದರೆ ಅನುಭವಿಸಿದ ಮಕ್ಕಳ ಬೆಳವಣಿಗೆಯಲ್ಲಿ ನರದೌರ್ಬಲ್ಯ ಸಂಬಂಧಿತ ತೊಂದರೆಗಳನ್ನು ತಡೆಯಲು ಅಧ್ಯಯನ ನಡೆಸಿದೆ.  ಇತ್ತೀಚೆಗೆ ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ನವಜಾತ ಶಿಶುಮರಣ ತಡೆಗಟ್ಟುವ ಎರಡು ಮಹತ್ವದ ಅಧ್ಯಯನಗಳನ್ನು ಈ ಸಂಶೋಧನಾ ಘಟಕವು ಹಮ್ಮಿಕೊಂಡಿದೆ.

ವಿಶ್ವಖ್ಯಾತಿ ಪಡೆದ ಸಂಶೋಧನಾ ಘಟಕ: ಅಮೆರಿಕದ ಆರೋಗ್ಯ ಸಚಿವೆ  ಕ್ಯಾಥಲಿನ್ ಸೆಬೇಲಿಯಸ್ ಸಂಶೋಧನಾ ಚಟುವಟಿಕೆಗಳನ್ನು ಗ್ರಾಮ ಮಟ್ಟದಲ್ಲಿ ಖುದ್ದಾಗಿ ವೀಕ್ಷಿಸಿ, ಜೆಎನ್‌ಎಂಸಿ ಜಿಲ್ಲೆಯ ಹಳ್ಳಿಗಳಲ್ಲಿ ಕೈಗೊಂಡ ಸಂಶೋಧನಾ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೇ ಈ ಜಾಗತಿಕ ಸಮ್ಮೇಳನದಲ್ಲಿ ಕೆ.ಎಲ್.ಇ ಸಂಸ್ಥೆಯ ಹಾಗೂ ವಿಶೇಷವಾಗಿ ಡಾ. ಪ್ರಭಾಕರ ಕೋರೆಯವರ ಆರೋಗ್ಯ ಕ್ಷೇತ್ರದಲ್ಲಿಯ ಕೊಡುಗೆಯನ್ನು ಶ್ಲಾಘಿಸಿದ್ದಾರೆ.

ಸಂಶೋಧನಾ ಘಟಕದ ಕಾರ್ಯಕ್ಷೇತ್ರದ ವಿಸ್ತರಣೆ: ಜೆಎನ್‌ಎಂಸಿ ಸಂಶೋಧನಾ ಘಟಕದ ಕಾರ್ಯ ವ್ಯಾಪ್ತಿಯನ್ನು ಬಾಗಲಕೋಟೆಯ ಬಿ.ವಿ.ವಿ ಸಂಘದ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ ಮತ್ತು ವಿಜಾಪುರ ಬಿ.ಎಲ್.ಡಿ ವಿಶ್ವವಿದ್ಯಾಲಯದ  ಬಿ.ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯಗಳೊಂದಿಗೆ ಕೈಜೋಡಿಸಿ ವಿಸ್ತರಿಸಲಾಗಿದೆ. ಈ ಸಂಶೋಧನಾ ಘಟಕದ ಚಟುವಟಿಕೆಗಳು ಬೆಳಗಾವಿ, ವಿಜಾಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ಸುಮಾರು 20 ಲಕ್ಷ ಜನಸಂಖ್ಯೆಯ 700 ಕ್ಕಿಂತಲೂ ಹೆಚ್ಚಿನ ಗ್ರಾಮಗಳಿಗೆ ವಿಸ್ತೃತಗೊಂಡಿದೆ.

ಮುಂಬರುವ ದಿನಗಳಲ್ಲಿ ಆರೋಗ್ಯ ಸೇವೆಗಳ ಸುಧಾರಣೆಯಲ್ಲಿ ಸಮುದಾಯದವರು ಎಂದಿನಂತೆ ನಮ್ಮಕೈಜೋಡಿಸಲೆಂಬುದು ನಮ್ಮಕಳಕಳಿಯ ಆಶಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT