ಮೂಡಲಗಿ: ‘ಜಗತ್ತಿಗೆ ಶಾಂತಿ ಮತ್ತು ಸಮಾನತೆಯನ್ನು ಸಾರಿದ ಶ್ರೇಯಸ್ಸು ಕ್ರೈಸ್ತ ಧರ್ಮಕ್ಕೆ ಇದೆ’ ಎಂದು ಅರಬಾವಿಯ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.
ಇಲ್ಲಿಯ ಮೆಥೊಡಿಸ್ಟ್ ಚರ್ಚ್ ಆವರಣದಲ್ಲಿ ಜರುಗಿದ ಪ್ರಕಟಣೆ ಪುಸ್ತಕದ ಧ್ಯಾನ ಕೂಟದ ಸಮಾರೋಪ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಶಾಂತಿಯ ಸಂದೇಶವನ್ನು ಸಾರಿದ ಏಸು ಕ್ರಿಸ್ತನ ಸಂದೇಶಗಳು ಸರ್ವಕಾಲಿಕವಾಗಿವೆ ಎಂದರು.
ಶಿಲುಬೆಗೆ ಏರಿಸಿದವರನ್ನು ಕ್ಷಮಿಸಿಲು ದೇವರಲ್ಲಿ ಪ್ರಾರ್ಥಿಸಿದ್ದು, ಕ್ಷಮಾಪಣೆಯು ಕ್ರೈಸ್ತ ಧರ್ಮದ ಬಹುದೊಡ್ಡ ಕೊಡುಗೆಯಾಗಿದ್ದು, ಇದು ಮಾನವ ಕುಲಕ್ಕೆ ಉತ್ತಮ ಸಂದೇಶವಾಗಿದೆ ಎಂದರು.
ಬಡವರು, ರೋಗಿಗಳು, ನಿರ್ಗತಿಕರಿಗೆ ಆಶ್ರಯ ನೀಡಿ ಅವರ ಕಷ್ಟಗಳಿಗೆ ಸ್ಪಂದಿಸುವ ಗುಣಶ್ರೇಷ್ಠತೆಯು ಕ್ರೈಸ್ತರಿಂದ ಬಂದಿದೆ. ಅಂಥ ಕಾರ್ಯವನ್ನು ಇಂದು ಕ್ರೈಸ್ತ ಮಶಿನರಿಗಳು ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಎಲ್ಲ ಧರ್ಮಗಳು ಒಂದೇಯಾಗಿದ್ದು, ತಮ್ಮ ಧರ್ಮದೊಂದಿಗೆ ಎಲ್ಲ ಧರ್ಮಗಳಿಗೆ ಗೌರವ ನೀಡಿ ಸಮಾಜ ಸ್ವಾಸ್ಥ್ಯವನ್ನು ಕಾಯಬೇಕು ಎಂದರು.
ಸಭಾಪಾಲಕ ರೇ. ಡ್ಯಾನಿಯಲ್ ಬಾಬು ಸಭೆಯ ನೇತೃತ್ವವಹಿಸಿದ್ದರು. ನಾಗಪುರದ ಫಾಸ್ಟ್ರ ಆರ್. ಪಾಲ್ ದೈವ ಸಂದೇಶ ನೀಡಿದರು. ಜಿಲ್ಲಾ ಮೇಲ್ವಿಚಾರಕ ರೇ.ಜೆ.ಎಲಿಯಾ ಮಾತನಾಡಿದರು.
ಪುರಸಭೆ ಅಧ್ಯಕ್ಷ ಕಮಲವ್ವ ಹಳಬರ, ಉಪಾಧ್ಯಕ್ಷ ರವಿ ಸೋನವಾಲ್ಕರ್, ಗೋಕಾಕ ಟಿಎಪಿಸಿಎಂಎಸ್ ಅಧ್ಯಕ್ಷ ಬಸಗೌಡ ಪಾಟೀಲ, ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಡಾ. ರಾಜೇಂದ್ರ ಸಣ್ಣಕ್ಕಿ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಷ ಢವಳೇಶ್ವರ, ರವೀಂದ್ರ ಸಣ್ಣಕ್ಕಿ, ಪುರಸಭೆ ಸದಸ್ಯರಾದ ರಾಮಣ್ಣಾ ಹಂದಿಗುಂದ, ಭೀಮಶಿ ಮಗದುಮ್, ಮಲೀಕ ಹುಣಶ್ಯಾಳ, ಶಬ್ಬೀರ್ ಡಾಂಗೆ, ರಮೇಶ ಸಣ್ಣಕ್ಕಿ, ಪ್ರಭು ಬಂಗೆನ್ನವರ, ಸಂತೋಷ ಸೋನವಾಲ್ಕರ, ಮರೆಪ್ಪ ಮರೆಪ್ಪಗೋಳ, ಬಿಇಒ ಅಜಿತ್ ಮನ್ನಿಕೇರಿ ಮತ್ತಿತರರು ಭಾಗವಹಿಸಿದ್ದರು.