ಹೊಸಪೇಟೆ (ವಿಜಯನಗರ): ಬಳ್ಳಾರಿ–ಹೊಸಪೇಟೆ–ದಾವಣಗೆರೆ ನಡುವೆ ರೈಲು ಓಡಿಸಬೇಕೆಂದು ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ಆಗ್ರಹಿಸಿದೆ.
ಗುರುವಾರ ನಗರ ರೈಲು ನಿಲ್ದಾಣದ ನವೀಕರಣ ಕೆಲಸ ವೀಕ್ಷಣೆಗೆ ಬಂದಿದ್ದ ರೈಲ್ವೆ ಸಚಿವಾಲಯದ ರೈಲು ಪ್ರಯಾಣಿಕರ ಸೌಲಭ್ಯಗಳ ಸಮಿತಿ ಸದಸ್ಯರಾದ ಶಿವರಾಜ್.ಕೆ ಗಾಂಡಿಗೆ, ಜಯಂತಿಲಾಲ್ ಜೈನ್, ವಿ.ಬಾಲಗಣಪತಿ, ಪ್ರಕಾಶ್ ಪಾಲ್ ಅವರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದರು.
ಬಳ್ಳಾರಿ–ದಾವಣಗೆರೆ ನಡುವೆ ಪ್ರಯಾಣಿಕರ ರೈಲು ಆರಂಭಿಸಿದರೆ ಕರಾವಳಿ, ಮಲೆನಾಡು ಭಾಗದೊಂದಿಗೆ ಕಲ್ಯಾಣ ಕರ್ನಾಟಕವನ್ನು ಬೆಸೆದಂತಾಗುತ್ತದೆ. ಗದಗ–ಹೊಸಪೇಟೆ–ಬಳ್ಳಾರಿ–ರಾಯಚೂರು ನಡುವೆ ನಿತ್ಯ ಬೆಳಿಗ್ಗೆ ರೈಲು ಓಡಿಸಬೇಕು. ಸಾಧ್ಯವಾದರೆ ಗುಂತಕಲ್–ಮಂತ್ರಾಲಯದ ವರೆಗೆ ವಿಸ್ತರಿಸಿದರೆ ಪ್ರಯಾಣಿಕರಿಗೆ ಬಹಳ ಅನುಕೂಲವಾಗುತ್ತದೆ ಎಂದು ವಿವರಿಸಿದರು.
ಮುಂಬೈ–ಗದಗ–ವಾಡಿ ರೈಲು ಹೊಸಪೇಟೆ ವರೆಗೆ ವಿಸ್ತರಿಸಬೇಕು. ಹೊಸಪೇಟೆಯಲ್ಲಿ ಪ್ರಯಾಣಿಕರ ಕೋಚ್ ದುರಸ್ತಿ ಕೇಂದ್ರ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು. ರೈಲು ನಿಲ್ದಾಣದ ಅಧಿಕಾರಿಗಳಾದ ಉಮೇಶ್, ಗಿರೀಶ್ ಪುರೋಹಿತ್, ರೈಲ್ವೆ ಸುರಕ್ಷತಾ ದಳದ ಮುಖ್ಯಸ್ಥ ರವಿಚಂದ್ರನ್ ಇದ್ದರು.
ವಿಜಯನಗರ ರೈಲ್ವೆ ಅಭಿವೃದ್ದಿ ಕ್ರಿಯಾ ಸಮಿತಿ ಅಧ್ಯಕ್ಷ ವೈ.ಯಮುನೇಶ್, ಕಾರ್ಯದರ್ಶಿ ಮಹೇಶ್ ಕುಡುತಿನಿ, ದೀಪಕ್ ಉಳ್ಳಿ, ಟಿ.ಎಂ.ತಿಪ್ಪೇಸ್ವಾಮಿ, ವಿಶ್ವನಾಥ ಕೌತಾಳ್, ಮೊಹಮ್ಮದ್ ಬಾಷಾ, ಬಿ.ಜಹಾಂಗೀರ್, ಬಿ.ವಿರೂಪಾಕ್ಷಪ್ಪ, ರಾಮಕೃಷ್ಣ ಇದ್ದರು.