ಹೊಸಪೇಟೆ(ವಿಜಯನಗರ): ತಾಲ್ಲೂಕಿನಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸುವಂತೆ ವಿಜಯನಗರ ಜಿಲ್ಲಾ ನಾಗರೀಕ ವೇದಿಕೆ, ರಾಜ್ಯ ರೈತ ಸಂಘ(ಕೋಡಿಹಳ್ಳಿ ಚಂದ್ರಶೇಖರ್ ಬಣ) ಹಾಗೂ ವಿನಾಯಕ ನಗರ ಬಡಾವಣೆ ಕ್ಷೇಮಾಭಿವೃದ್ದಿ ಸಂಘ ಆಗ್ರಹಿಸಿದೆ.
ಈ ಸಂಬಂಧ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಬಳಿಕ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.
ಸ್ಥಳೀಯ ಸಕ್ಕರೆ ಕಾರ್ಖಾನೆ ಮುಚ್ಚಿದ ಕಾರಣ ರೈತರಿಗೆ ಗಾಯದ ಮೇಲೆ ಬರೆ ಇಟ್ಟಂತಾಗಿದೆ. ತಾಲ್ಲೂಕು ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ರೈತರು ಬೇರೆ ಜಿಲ್ಲೆಗಳ ಕಾರ್ಖಾನೆಗೆ ಕಬ್ಬು ಸಾಗಾಣಿಕೆ ಮಾಡುವುದರಿಂದ ಸಾಗಾಣೆ ವೆಚ್ಚ ಅಧಿಕವಾಗಿ ನಷ್ಟಕ್ಕೆ ಸಿಲುಕಿದ್ದಾರೆ ಎಂದು ಅಳಲು ತೋಡಿಕೊಂಡರು.
ಸಾಗಾಣೆ ಮತ್ತು ಇತರೆ ವೆಚ್ಚಗಳಿಂದ ರೈತರಿಗೆ ಕನಿಷ್ಠ ₹30 ಸಾವಿರ ನಷ್ಟವಾಗುತ್ತಿದೆ. ಸ್ಥಳೀಯವಾಗಿ ಕಾರ್ಖಾನೆ ಆರಂಭವಾದರೆ ತಾಲ್ಲೂಕಿನಲ್ಲಿ ಆರ್ಥಿಕ ಚೇತರಿಕೆ, ಉದ್ಯೋಗಾವಕಾಶ ಹೆಚ್ಚುತ್ತದೆ. ಜಿಲ್ಲಾ ಖನಿಜ ನಿಧಿ ನೆರವಿನಿಂದ ಖಾಸಗಿ ಅಥವಾ ಸಹಕಾರಿ ಕ್ಷೇತ್ರದಲ್ಲಿ ನೂತನ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.