ಹೊಸಪೇಟೆ: ದೇವದಾಸಿ ಪದ್ಧತಿ ನಿಷೇಧ ಕಾಯ್ದೆಗೆ ತಿದ್ದುಪಡಿ ಮಾಡುವುದು ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಕಾರ್ಯಕರ್ತೆಯರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಬಳಿಕ ತಹಶೀಲ್ದಾರ್ ಎಚ್. ವಿಶ್ವನಾಥ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಬಳಿಕ ಮಾತನಾಡಿದ ಸಂಘದ ಜಿಲ್ಲಾ ಅಧ್ಯಕ್ಷ ಕೆ. ನಾಗರತ್ನಮ್ಮ, ‘ಎಲ್ಲ ದೇವದಾಸಿ ಮಹಿಳೆಯರಿಗೂ ಮತ್ತು ಆ ಕುಟುಂಬಗಳ ಪರಿತ್ಯಕ್ಷ ಸ್ತ್ರೀಯರಿಗೂ ಮಾಸಿಕ ₹5 ಸಾವಿರ ಸಹಾಯ ಧನ ನೀಡಬೇಕು. ಎಲ್ಲ ದೇವದಾಸಿ ಮತ್ತು ಅವರ ಕುಟುಂಬ ಸದಸ್ಯರ ಗಣತಿ ಕಾರ್ಯ ರಾಜ್ಯದಾದ್ಯಂತ ಕೈಕೊಳ್ಳಬೇಕು. ಈ ಹಿಂದೆ ನಡೆಸಿದ ಸರ್ವೇಯಿಂದ ಕೆಲವರ ಹೆಸರುಗಳು ಕೈಬಿಟ್ಟು ಹೋಗಿವೆ’ ಎಂದು ತಿಳಿಸಿದರು.
‘ದೇವದಾಸಿಯರ ಪುನರ್ವಸತಿಗಾಗಿ ಭೂಮಿ ಒದಗಿಸುವ ಯೋಜನೆಗೆ ಪ್ರತಿ ವರ್ಷ ₹5 ಸಾವಿರ ಕೋಟಿ ಅನುದಾನ ತೆಗೆದಿರಿಸಬೇಕು. ಹಿತ್ತಲು ಸಹಿತ ಹತ್ತು ಸೇಂಟ್ಸ್ ಸ್ಥಳದಲ್ಲಿ ಐದು ಲಕ್ಷದಲ್ಲಿ ಉಚಿತ ಮನೆ ಕಟ್ಟಿಸಿಕೊಡಬೇಕು. ಎಲ್ಲ ರೀತಿಯ ಸಾಲ ಮನ್ನಾ ಮಾಡಬೇಕು. ದೇವದಾಸಿಯರ ಮಕ್ಕಳಿಗೆ ವಿದ್ಯಾಭ್ಯಾಸ ಮತ್ತು ಉದ್ಯೋಗಕ್ಕೆ ಸರ್ಕಾರ ನೆರವಾಗಬೇಕು’ ಎಂದು ಆಗ್ರಹಿಸಿದರು.
ತಾಲ್ಲೂಕು ಅಧ್ಯಕ್ಷೆ ಹಂಪಕ್ಕ, ಕಾರ್ಯದರ್ಶಿ ಎಸ್. ಯಲ್ಲಮ್ಮ, ಹುಲಿಗೆಮ್ಮ, ಗರಗದ ತಾಯಮ್ಮ, ಡಿ. ತಾಯಮ್ಮ, ಹನುಮಂತಮ್ಮ, ಹನುಮವ್ವ, ಕಣಿಮವ್ವ, ಲಕ್ಷ್ಮವ್ವ, ಆರ್. ಭಾಸ್ಕರ್ ರೆಡ್ಡಿ, ಎಂ. ಉಮಾಮಹೇಶ್ವರ ಇದ್ದರು.