ಬಳ್ಳಾರಿ: ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ತಿಂಥಿಣಿ ಬ್ರಿಜ್ ನಲ್ಲಿ ಜನವರಿ 12 ರಿಂದ 3 ದಿನಗಳ ಕಾಲ ಹಾಲುಮತ ಸಂಸ್ಕೃತಿ ವೈಭವವನ್ನು ಆಯೋಜಿಸಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ಎಂ.ರೇವಣ್ಣ ತಿಳಿಸಿದರು.
ಮೊದಲ ದಿನ ಬೀರದೇವರ ಉತ್ಸವ ನಡೆಯಲಿದೆ. ಎರಡನೆ ದಿನ ಸುಡುಗಾಡು ಸಿದ್ಧರು, ಟಗರು ಜೋಗಿಗಳು ಹೆಳವರ ಸಮಾವೇಶ ನಡೆಯಲಿದೆ. ಮೂರನೇ ದಿನ ಶ್ರೀ ಬೊಮ್ಮಗೊಂಡೇಶ್ವರ, ಶ್ರೀ ಸಿದ್ಧರಾಮೇಶ್ವರ ಉತ್ಸವ ಜರುಗಲಿದೆ. ಟಗರು ಕಾಳಗ, ರಕ್ತ ಪರೀಕ್ಷೆ, ರಕ್ತದಾನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಉತ್ಸವದಲ್ಲಿ ಸಚಿವರಾದ ಕೆ.ಎಸ್. ಈಶ್ವರಪ್ಪ, ಲಕ್ಷ್ಮಣ ಸವದಿ, ಆನಂದ್ ಸಿಂಗ್ ಸ್ಥಳೀಯ ಸಂಸ್ಥೆಗಳ ಜನಪ್ರತಿಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಸಾಹಿತ್ಯ ಕ್ಷೇತ್ರದಲ್ಲಿ ದುಡಿದ ಡಾ. ಹೆಚ್.ಜೆ.ಲಕ್ಕಪ್ಪಗೌಡ ಅವರಿಗೆ ಹಾಲುಮತ ಭಾಸ್ಕರ, ಸಮಾಜ ಸೇವೆಗಾಗಿ ಎಂ.ಎಸ್. ಹೆಳವರ ಅವರಿಗೆ ಪದ್ಮಶ್ರೀ ಮತ್ತು ಹಾಲುಮತ ಸಂಸ್ಕೃತಿ ಸೇವೆ ಮಾಡುತ್ತಿರುವ ಸುಭದ್ರಮ್ಮ ಕಾಡಮಂಚಪ್ಪ ಗೊಸಲೇರು ಅವರಿಗೆ ಕನಕ ರತ್ನ ಪ್ರಶಸ್ತಿಯೊಂದಿಗೆ ತಲಾ ₹50 ಸಾವಿರ ನಗದು ನೀಡಿ ಸನ್ಮಾನ ಮಾಡಲಾಗುವುದೆಂದು ತಿಳಿಸಿದರು.
ಹಾಲುಮತ ಸಮಾಜದ ನಾಯಕರಾದ ಕೆ.ಎಸ್.ಎಲ್. ಸ್ವಾಮಿ, ಕೆಬಿ ಶಾಂತಪ್ಪ, ಬೆಣಕಲ್ ಬಸವರಾಜಗೌಡ, ಕೆ.ಬಸಪ್ಪ, ಕೆ. ಎರಿಸ್ವಾಮಿ, ಜೀವೇಶ್ವರಿ ರಾಮಕೃಷ್ಣ, ಬಿಎಂ ಪಾಟೀಲ್, ಕಾಮೇಶ್, ಕೆ. ಮಲ್ಲಿಕಾರ್ಜುನ, ಕೆ. ಮಲ್ಲೇಶ್ ಇದ್ದರು.