ಹೊಸಪೇಟೆ: ಬಿಜೆಪಿ ಅಭ್ಯರ್ಥಿ ವೈ. ದೇವೇಂದ್ರಪ್ಪನವರ ಪರ ಪಕ್ಷದ ಸ್ಥಳೀಯ ಮುಖಂಡರು ಗುರುವಾರ ನಗರದ ವಿವಿಧ ಬಡಾವಣೆಗಳಲ್ಲಿ ಚುನಾವಣಾ ಪ್ರಚಾರ ಕೈಗೊಂಡರು.
ಎಂ.ಜೆ. ನಗರ, ಬಸವೇಶ್ವರ ಬಡಾವಣೆ, ನೆಹರೂ ಕಾಲೊನಿ, ಪಟೇಲ್ ನಗರ, ರಾಜೀವ್ ನಗರ, ನೇಕಾರ ಕಾಲೊನಿ, ಎಂ.ಪಿ. ಪ್ರಕಾಶ ನಗರದಲ್ಲಿ ಮನೆ ಮನೆ ಸುತ್ತಾಡಿ ಕರಪತ್ರಗಳನ್ನು ಹಂಚಿ, ಚುನಾವಣೆಯಲ್ಲಿ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಈ ವೇಳೆ ಮಾತನಾಡಿದ ಬಿಜೆಪಿ ತಾಲ್ಲೂಕು ಅಧ್ಯಕ್ಷ ಅನಂತ ಪದ್ಮನಾಭ ಸ್ವಾಮಿ, ‘ವಿದ್ಯಾವಂತರು ಟಿ.ವಿ., ವಾಟ್ಸ್ ಆ್ಯಪ್ನಲ್ಲಿ ಕಾಲಹರಣ ಮಾಡದೆ ಮತಗಟ್ಟೆಗಳಿಗೆ ಹೋಗಿ ತಪ್ಪದೇ ಮತ ಚಲಾಯಿಸಬೇಕು. ಪ್ರತಿಯೊಬ್ಬರ ಮತ ಕೂಡ ಅಮೂಲ್ಯವಾದುದು. ಯೋಗ್ಯರಾದವರನ್ನು ಚುನಾವಣೆಯಲ್ಲಿ ಆರಿಸಿದರೆ ಪ್ರಜಾತಂತ್ರ ವ್ಯವಸ್ಥೆ ಗಟ್ಟಿಗೊಳ್ಳಲು ಸಾಧ್ಯ’ ಎಂದು ಹೇಳಿದರು.
‘ಪ್ರತಿ ಚುನಾವಣೆಯಲ್ಲಿ ಮತದಾನದ ಪ್ರಮಾಣ ಕುಸಿಯುತ್ತಿದೆ. ಅನಕ್ಷರಸ್ಥರು, ಕೂಲಿ ಕಾರ್ಮಿಕರು ತಪ್ಪದೇ ಮತದಾನ ಮಾಡುತ್ತಿದ್ದಾರೆ. ಆದರೆ, ವಿದ್ಯಾವಂತರೇ ಚುನಾವಣಾ ಪ್ರಕ್ರಿಯೆಯಿಂದ ದೂರ ಉಳಿಯುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಉಪ ಚುನಾವಣೆಯಲ್ಲಿ ಮತದಾನದ ಪ್ರಮಾಣ ಕುಸಿತವಾದ ಕಾರಣದಿಂದಲೇ ಬಿಜೆಪಿಗೆ ಸೋಲಾಯಿತು. ಯಾವುದೇ ಕಾರಣಕ್ಕೂ ಮತದಾನ ಪ್ರಮಾಣ ಕಡಿಮೆ ಆಗಬಾರದು’ ಎಂದರು.
ಬಿಜೆಪಿಯ ರಾಘವೇಂದ್ರ, ಕಟಗಿ ರಾಮಕೃಷ್ಣ, ಮೈಲಾರಲಿಂಗ, ಶ್ರೀನಿವಾಸ್ ಯಾದವ್, ಮಲಪನಗುಡಿ ಶಂಕರ್, ತಾಲ್ಲೂಕು ಪಂಚಾಯಿತಿ ಸದಸ್ಯ ತಿಪ್ಪೇಸ್ವಾಮಿ ಇದ್ದರು.