ಹೊಸಪೇಟೆ: ರಾಯಚೂರಿನ ಪಶ್ಚಿಮ ಠಾಣೆಯ ಪಿ.ಎಸ್.ಐ. ನಾಗರಾಜ ಮೇಕಾ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಆಗ್ರಹಿಸಿ ತಾಲ್ಲೂಕು ವಕೀಲರ ಸಂಘದವರು ಶುಕ್ರವಾರ ಇಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿದರು.
ನಗರದ ಮಹಾತ್ಮ ಗಾಂಧಿ ವೃತ್ತದಿಂದ ತಾಲ್ಲೂಕು ಕಚೇರಿ ವರೆಗೆ ರ್ಯಾಲಿ ನಡೆಸಿದರು. ಪಿ.ಎಸ್.ಐ. ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ತಹಶೀಲ್ದಾರ್ಗೆ ಮನವಿ ಪತ್ರ ಸಲ್ಲಿಸಿದರು.
‘ಅಂಗವಿಕಲರಾಗಿರುವ ವಕೀಲ ವೀರಯ್ಯ ಸ್ವಾಮಿ ಅವರಿಗೆ ಪಿ.ಎಸ್.ಐ. ನಾಗರಾಜ ಅವರು ಅಕ್ರಮವಾಗಿ ಬಂಧಿಸಿ, ದೈಹಿಕವಾಗಿ ಹಿಂಸೆ ನೀಡಿದ್ದಾರೆ. ಸುಪ್ರೀಂಕೋರ್ಟ್ ಆದೇಶ ಹಾಗೂ ಮಾನವ ಹಕ್ಕುಗಳನ್ನು ಉಲ್ಲಂಘಿಸಿದ್ದಾರೆ. ಹಾಗಾಗಿ ಅವರ ವಿರುದ್ಧ ಕ್ರಮ ಜರುಗಿಸಬೇಕು. ಜತೆಗೆ ರಾಜ್ಯದ ಎಲ್ಲ ವಕೀಲರಿಗೆ ಸೂಕ್ತ ಭದ್ರತೆ ಒದಗಿಸಬೇಕು’ ಎಂದು ಪ್ರಧಾನ ಕಾರ್ಯದರ್ಶಿ ಡಿ. ವೀರನಗೌಡ ಆಗ್ರಹಿಸಿದ್ದಾರೆ.
ಸಂಘದ ಮುಖಂಡರಾದ ಎಚ್. ಉಮೇಶ್, ಜಿ.ಎಂ. ಬಾಷಾ, ಕ್ಯಾರ್ ವೆಂಕಟೇಶ, ಕರುಣಾನಿಧಿ, ಟಿ.ಎಚ್. ಎಂ.ಚಂದ್ರಶೇಖರ, ಎಂ. ನೀಲಕಂಟಯ್ಯ, ಎಸ್. ನಾಗರಾಜ, ಎಚ್. ವಿಶ್ವನಾಥ್, ಎಸ್. ಶ್ರೀನಿವಾಸ್, ಬಿ.ಜಿ. ರಾಧಾದೇವಿ, ಇ. ಪುಷ್ಪಲತಾ ಇದ್ದರು.