ಹೊಸಪೇಟೆ: ‘ಶಿಸ್ತು, ಸಮಯ ಪಾಲನೆ ಹಾಗೂ ರಾಷ್ಟ್ರ ಪ್ರೇಮದ ಗುಣಗಳನ್ನು ಎನ್.ಸಿ.ಸಿ. ಬೆಳೆಸುತ್ತದೆ’ ಎಂದು ಡಿ.ವೈ.ಎಸ್ಪಿ. ವಿ. ರಘುಕುಮಾರ ತಿಳಿಸಿದರು.
ಇಲ್ಲಿನ ಶಂಕರ್ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಎನ್.ಸಿ.ಸಿ. ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ವಿದ್ಯಾರ್ಥಿಗಳು ಎನ್.ಸಿ.ಸಿ. ಸೇರುವುದರಿಂದ ಹಲವು ಪ್ರಯೋಜನಗಳಿವೆ. ಶಿಕ್ಷಣ ಮತ್ತು ಉದ್ಯೋಗದಲ್ಲಿ ವಿದ್ಯಾರ್ಥಿಗಳಿಗೆ ಮೀಸಲಾತಿ ಸೌಲಭ್ಯ ದಕ್ಕುತ್ತದೆ’ ಎಂದು ಹೇಳಿದರು.
ಸುಬೇದಾರ್ ಶುಕ್ಲಾ ಮೋರೆ ಮಾತನಾಡಿ, ‘ವಿದ್ಯಾರ್ಥಿಗಳು ಶಿಸ್ತನ್ನು ಪಾಲಿಸದಿದ್ದರೆ ಬದುಕೇ ವ್ಯರ್ಥವಾಗುತ್ತದೆ. ಶಿಸ್ತು ಇದ್ದರೆ ಅಂದುಕೊಂಡಿದ್ದನ್ನು ಸಾಧಿಸಬಹುದು’ ಎಂದರು.
ಹವಾಲ್ದಾರ್ ಸುಹಾಸ್ ಪಟೇಲ್ ಮಾತನಾಡಿ, ‘ರಾಷ್ಟ್ರವನ್ನು ಆಪತ್ತಿನಿಂದ ರಕ್ಷಿಸುವ ಹೊಣೆಯನ್ನು ಎನ್.ಸಿ.ಸಿ. ಮಾಡುತ್ತದೆ. ಯುವಶಕ್ತಿ ರಚನಾತ್ಮಕ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಸಹಾಯ ಮಾಡುತ್ತದೆ’ ಎಂದು ತಿಳಿಸಿದರು.
ವಿಜಯನಗರ ಕಾಲೇಜಿನ ಎನ್.ಸಿ.ಸಿ. ಅಧಿಕಾರಿ ಟಿ.ಎಂ. ಪ್ರಭುಸ್ವಾಮಿ, ಪ್ರಾಚಾರ್ಯಬಿ.ಜಿ.ಕನಕೇಶಮೂರ್ತಿ,ಪ್ರಾಧ್ಯಾಪಕರಾದ ಟಿ.ಎಚ್.ಬಸವರಾಜ, ಕೆ. ವೆಂಕಟೇಶ್, ದೈಹಿಕ ಶಿಕ್ಷಣ ನಿರ್ದೇಶಕ ಮಂಜುನಾಥ ಎಚ್. ಆರೆಂಟನೂರ, ವಿದ್ಯಾರ್ಥಿನಿ ದೇವಮ್ಮ ಇದ್ದರು.