ವಿಜಯನಗರ (ಹೊಸಪೇಟೆ): ‘ಗಾನಯೋಗಿ ಕವಿ ಗವಾಯಿ ಪುಟ್ಟರಾಜರು ವೃತ್ತಿ ರಂಗಭೂಮಿ ಕಲೆಯ ಶ್ರೇಯೋಭಿವೃದ್ದಿಗೆ ಕಾರಣೀಕರ್ತರು. ಅವರು ನಡೆದಾಡುವ ದೇವರಾಗಿದ್ದರು’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಲಲಿತಕಲಾ ನಿಕಾಯದ ಡೀನ್ ಕೆ. ರವೀಂದ್ರನಾಥ ತಿಳಿಸಿದರು.
ವಿಶ್ವವಿದ್ಯಾಲಯದ ಸಂಗೀತ ಮತ್ತು ನೃತ್ಯ ವಿಭಾಗದಲ್ಲಿ ಬುಧವಾರ ಆಯೋಜಿಸಿದ್ದ ಪುಟ್ಟರಾಜ ಗವಾಯಿಗಳವರ 107 ನೇ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದರು.
‘ಗುರು ಪುಟ್ಟರಾಜರು ವೀರೇಶ್ವರ ಪುಣ್ಯಾಶ್ರಮದಲ್ಲಿ ಅಂಧ, ಅನಾಥ ಮಕ್ಕಳ ಬಾಳಿಗೆ ಬೆಳಕಾದವರು. ಅಲ್ಲೇ ಹಿಂದೂಸ್ತಾನಿ ಸಂಗೀತ ಕಲಿಯಲು ಅನುವು ಮಾಡಿಕೊಟ್ಟವರು. ಸ್ವತಃ ಸಾಹಿತಿಗಳಾಗಿ ಉತ್ತಮ ವಾಜ್ಮಿಗಳಾಗಿದ್ದರು’ ಎಂದು ಸ್ಮರಿಸಿದರು.
ಸಂಗೀತ ಮತ್ತು ನೃತ್ಯ ವಿಭಾಗದ ಮುಖ್ಯಸ್ಥ ಗೋವಿಂದ, ‘ನಡೆದಾಡುವ ದೇವರೆಂದು ಖ್ಯಾತಿ ಹೊಂದಿದ ಪುಟ್ಟರಾಜರು ಗಾನ ಗಾರುಡಿಗರಾಗಿ ವಿಶ್ವಮಾನ್ಯರಾದವರು. ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಇದ್ದಾರೆ’ ಎಂದು ತಿಳಿಸಿದರು.
ಸಂಗೀತ ವಿಭಾಗದ ವಿದ್ಯಾರ್ಥಿಗಳು ಪುಟ್ಟರಾಜ ಗವಾಯಿಗಳು ರಚಿಸಿದ ಸ್ತುತಿ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು.