ಬಳ್ಳಾರಿ: ಶುಕ್ರವಾರ ಮಧ್ಯಾಹ್ನ ಪರೀಕ್ಷೆ ನಡೆಯುತ್ತಿದ್ದ ವೇಳೆ ಪ್ರಶ್ನೆ ಪತ್ರಿಕೆಯಲ್ಲಿರುವ ದೋಷ ಪತ್ತೆಯಾಗಿದ್ದರಿಂದ ಪ್ರಥಮ ಪಿ.ಯು ಕನ್ನಡ ಐಚ್ಛಿಕ (ಕೋಡ್ ಸಂಖ್ಯೆ 16) ಪರೀಕ್ಷೆಯನ್ನು ಮುಂದೂಡಲಾಗಿದ್ದು, ಈ ತಿಂಗಳ 16ಕ್ಕೆ ಮರುನಿಗದಿ ಮಾಡಲಾಗಿದೆ.
‘ಪ್ರಶ್ನೆ ಪತ್ರಿಕೆಯಲ್ಲಿ ದ್ವಿತೀಯ ಪಿ.ಯು ಎಂದು ಮುದ್ರಣವಾಗಿತ್ತು. ಅಲ್ಲದೆ, ಕೆಲವು ಲೋಪದೋಷಗಳು ಕಂಡುಬಂದಿದ್ದರಿಂದ ವಿದ್ಯಾರ್ಥಿಗಳಿಗೆ ಗೊಂದಲ ಸೃಷ್ಟಿಯಾಗಬಾರದು ಎಂಬ ಕಾರಣಕ್ಕೆ ಕೊನೇ ಕ್ಷಣದಲ್ಲಿ ಪರೀಕ್ಷೆ ಮುಂದೂಡಲಾಯಿತು’ ಎಂದು ಪಿ.ಯು ಇಲಾಖೆ ಮೂಲಗಳು ತಿಳಿಸಿವೆ.
ದ್ವಿತೀಯ ಪಿ.ಯು ಪೂರ್ವಸಿದ್ಧತಾ ಪರೀಕ್ಷೆಗೆ ಹೊಂದಿಸಲಾಗಿದ್ದ ಪ್ರಶ್ನೆ ಪತ್ರಿಕೆಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಗಿತ್ತು. ಇದು ಗಮನಕ್ಕೆ ಬಂದ ತಕ್ಷಣ ಪರೀಕ್ಷೆ ಮುಂದೂಡಲಾಯಿತು.