ಹೊಸಪೇಟೆ (ವಿಜಯನಗರ): ನಗರ ಸೇರಿದಂತೆ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಮೂರು ದಿನಗಳಿಂದ ಬಿಟ್ಟು ಬಿಟ್ಟು ಮಳೆಯಾಗುತ್ತಿದೆ.
ಗುರುವಾರ ಮಧ್ಯಾಹ್ನ ಮೂರುವರೆ ಗಂಟೆಗೆ ಆರಂಭಗೊಂಡ ಜಿಟಿಜಿಟಿ ಮಳೆ ಸಂಜೆಯ ವರೆಗೆ ಸುರಿಯಿತು. ಬಳಿಕ ಬಿಟ್ಟು ಬಿಟ್ಟು ಸುರಿಯಿತು. ಮಂಗಳವಾರ, ಬುಧವಾರ ಕೂಡ ಇದೇ ರೀತಿ ಮಳೆಯಾಗಿತ್ತು.
ಸತತವಾಗಿ ಮಳೆ ಸುರಿಯುತ್ತಿರುವುದರಿಂದ ವಾತಾವರಣ ಸಂಪೂರ್ಣ ತಂಪಾಗಿದೆ. ಮಳೆಯ ನಡುವೆಯೇ ಹಲವು ಕಡೆಗಳಲ್ಲಿ ನಾಗರಪಂಚಮಿ ನಿಮಿತ್ತ ಮಹಿಳೆಯರು ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದರು.
ಸ್ವಾತಂತ್ರ್ಯ ದಿನೋತ್ಸವಕ್ಕೆ ಕೆಲವೇ ದಿನಗಳು ಉಳಿದಿರುವುದರಿಂದ ಪಥ ಸಂಚಲನಕ್ಕೆ ನಗರದ ಮುನ್ಸಿಪಲ್ ಮೈದಾನದಲ್ಲಿ ಭರದ ತಾಲೀಮು ನಡೆಯುತ್ತಿದೆ. ಗುರುವಾರ ಜಿಟಿಜಿಟಿ ಮಳೆ ಲೆಕ್ಕಿಸದೆ ಪೊಲೀಸರು, ಗೃಹರಕ್ಷಕರು, ಎನ್ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್ ಸೇರಿದಂತೆ ಇತರೆ ತುಕಡಿಗಳು ಅಭ್ಯಾಸ ನಡೆಸಿದರು.