ಬಳ್ಳಾರಿ: ‘ಅತ್ಯಾಚಾರಿಗಳಿಗೆ ಪುರುಷತ್ವ ಹರಣ ಶಿಕ್ಷೆ ವಿಧಿಸುವ ಕಠಿಣ ಕಾನೂನು ಜಾರಿಗೆ ತರಬೇಕು’ ಎಂದು ಭಾರತೀಯ ಜನಶಕ್ತಿ ಕಾಂಗ್ರೆಸ್ ಪಕ್ಷ'ದ ಸಂಸ್ಥಾಪಕ ಅಧ್ಯಕ್ಷೆ ಅನುಪಮಾ ಶೆಣೈ ಆಗ್ರಹಿಸಿದರು.
‘ಪುರುಷತ್ವ ಹರಣ ಶಿಕ್ಷೆಯು ಅತ್ಯಾಚಾರಿಗಳಿಗಷ್ಟೇ ಅಲ್ಲದೇ, ಅಂಥವರನ್ನು ಅನುಸರಿಸುವ ಆಲೋಚನೆಯುಳ್ಳವರಿಗೂ ಎಚ್ಚರಿಕೆಯ ಪಾಠವಾಗುತ್ತದೆ’ ಎಂದು ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಪಾದಿಸಿದರು.
‘ಹಾಥರಸ್ನ ಯುವತಿ ಮೇಲಿನ ಅತ್ಯಾಚಾರ ಪ್ರಕರಣವನ್ನು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷ ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳಬಾರದು. ನಿಷ್ಪಕ್ಷಪಾತ ತನಿಖೆ ನಡೆಸಿದರೆ ಮಾತ್ರ ಸಂತ್ರಸ್ತ ಯುವತಿಗೆ ಹಾಗೂ ಆಕೆಯ ಕುಟುಂಬದವರಿಗೆ ನ್ಯಾಯ ಸಿಗುತ್ತದೆ’ ಎಂದರು.