ಬಳ್ಳಾರಿ: ‘ವಿಶ್ವದಾದ್ಯಂತ ಇಂದು ನಿರಾಶ್ರಿತರ ಜೀವನದಲ್ಲಿ ಕೋಲಾಹಲ ಎದ್ದಿದೆ. ಸಮಸ್ಯೆಗಳ ಮೂಲಕಾರಣ ಹುಡುಕುವ ಜನರ ದಿಕ್ಕು ತಪ್ಪಿಸಲು ಹೊರಗಿನಿಂದ ಬಂದವರೇ ಸಮಸ್ಯೆಯ ಮೂಲ ಎಂಬ ಸುಳ್ಳನ್ನು ಹಬ್ಬಿಸಲಾಗುತ್ತಿದೆ’ ಎಂದು ಎಸ್ಯುಸಿಐಸಿ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಶಶಿಧರ್ ಪ್ರತಿಪಾದಿಸಿದರು.
ನಗರದ ಗಾಂಧಿಭವನದಲ್ಲಿ ಮಂಗಳವಾರ ಪಕ್ಷದ ಜಿಲ್ಲಾ ಸಮಿತಿಯು ಏರ್ಪಡಿಸಿದ್ದ ಶಿವದಾಸ್ ಘೋಷ್ ಅವರ 43ನೇ ಸ್ಮರಣ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಇಂದು ಬಂಡವಾಳಶಾಹಿ ವ್ಯವಸ್ಥೆ ಅಂತರರಾಷ್ಟ್ರೀಯವಾಗಿ ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿದೆ. ಬಿಕ್ಕಟ್ಟಿನಿಂದ ಪಾರಾಗಲು ಮತ್ತು ಕ್ರೂರ ವ್ಯವಸ್ಥೆಯನ್ನು ಜೀವಂತವಾಗಿಡಲು ದಮನಕಾರಿ ನೀತಿಯ ಮೊರೆ ಹೋಗಿದೆ’ ಎಂದು ಆರೋಪಿಸಿದರು.
‘ದೇಶದ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಎರಡನೇ ಬಾರಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರದ ಇತ್ತೀಚಿನ ಬಜೆಟ್ ತಪ್ಪು ಅಂಕಿ–ಅಂಶಗಳ ಮೂಲಕ ಪೊಳ್ಳು ಭರವಸೆಗಳನ್ನು ನೀಡಿದೆ. ಇದು ಶ್ರೀಮಂತರನ್ನು ಅತ್ಯಂತ ಶ್ರೀಮಂತರನ್ನಾಗಿ, ಬಡವರನ್ನು ಇನ್ನೂ ನಿರ್ಗತಿಕರನ್ನಾಗಿಸುವ ಪ್ರಯತ್ನ’ ಎಂದು ದೂರಿದರು.
ಪಕ್ಷದ ಜಿಲ್ಲಾ ಕಾರ್ಯದರ್ಶಿ ರಾಧಾಕೃಷ್ಣ ಉಪಾಧ್ಯ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದಎ.ದೇವದಾಸ್, ಎಂ.ಎನ್ ಮಂಜುಳಾ, ನಾಗಲಕ್ಷ್ಮಿ, ಡಾ.ಪ್ರಮೋದ್, ಸೋಮಶೇಖರಗೌಡ, ಎ.ಶಾಂತಾ, ಗೋವಿಂದ್ ಉಪಸ್ಥಿತರಿದ್ದರು.