ಹೂವಿನಹಡಗಲಿ: ಕಲಬುರ್ಗಿ ವಿಮಾನ ನಿಲ್ದಾಣ ಉದ್ಘಾಟನೆ ನೆಪದಲ್ಲಿ ಮದಿಹಾಳ ತಾಂಡಾದಲ್ಲಿದ್ದ ಸೇವಾಲಾಲ ಹಾಗೂ ಮರಿಯಮ್ಮ ದೇವಿ ದೇವಸ್ಥಾನ ತೆರವುಗೊಳಿಸಿರುವ ಸರ್ಕಾರದ ಕ್ರಮವನ್ನು ಇಲ್ಲಿನ ಕರ್ನಾಟಕ ತಾಂಡಾ ರಕ್ಷಣಾ ವೇದಿಕೆ ಪದಾಧಿಕಾರಿಗಳು ಖಂಡಿಸಿದ್ದಾರೆ.
ಸೋಮವಾರ ತಹಶೀಲ್ದಾರ್ ಕೆ.ರಾಘವೇಂದ್ರ ರಾವ್ ಅವರಿಗೆ ಮನವಿ ಸಲ್ಲಿಸಿ, ಬಂಜಾರ ಸಮುದಾಯದ ಕುಲದೈವ ಸೇವಾಲಾಲ, ಮರಿಯಮ್ಮ ದೇವಸ್ಥಾನಗಳನ್ನು ರಾತ್ರೋರಾತ್ರಿ ತೆರವುಗೊಳಿಸಿ, ಸಮುದಾಯದ ಧಾರ್ಮಿಕ ಭಾವನೆಗೆ ಸರ್ಕಾರ ಧಕ್ಕೆ ತಂದಿದೆ. ಸಮಾಜದವರ ಜತೆ ಸೌಜನ್ಯಕ್ಕೂ ಚರ್ಚಿಸದೇ ದೇವಸ್ಥಾನಗಳನ್ನು ದ್ವಂಸ ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಕಲಬುರ್ಗಿ ವಿಮಾನ ನಿಲ್ದಾಣಕ್ಕೆ ಶೇ 70ರಷ್ಟು ಲಂಬಾಣಿ ಸಮುದಾಯದವರ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಹಾಗಾಗಿ ವಿಮಾನ ನಿಲ್ದಾಣಕ್ಕೆ ಸೇವಾಲಾಲ ಹೆಸರು ನಾಮಕರಣ ಮಾಡಬೇಕು. ಭೂಮಿ ಕಳೆದುಕೊಂಡ ರೈತರ ಕುಟುಂಬಕ್ಕೆ ಉದ್ಯೋಗ ನೀಡಿ, ಹೆಚ್ಚಿನ ಪರಿಹಾರ ನೀಡಬೇಕು. ನೆಲಸಮ ಮಾಡಿರುವ ಸ್ಥಳದಲ್ಲೇ ಸೇವಾಲಾಲ, ಮರಿಯಮ್ಮ ದೇವಸ್ಥಾನ ನಿರ್ಮಿಸಬೇಕು ಎಂದು ಆಗ್ರಹಿಸಿದರು.
ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಡಿ.ನಾಯ್ಕ, ಮುಖಂಡರಾದ ಬಿ.ಪರಮೇಶ್ವರಪ್ಪ, ಡಾ.ಎಲ್.ಪಿ.ನಾಯ್ಕ ಕಠಾರಿ, ವಿ.ಡಿ.ನಾಯ್ಕ, ಹಾಲ್ಯಾನಾಯ್ಕ, ಶ್ರೀಧರನಾಯ್ಕ, ರಮೇಶನಾಯ್ಕ, ನಿವೃತ್ತ ಪಿಎಸ್ಐ ವೀರೇಶನಾಯ್ಕ ಇದ್ದರು.